newsics.com
ಬೆಂಗಳೂರು: ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಇತ್ತ ಪ್ರೀತಿಯ ಮಡದಿ ಕಳೆದುಕೊಂಡು ಪತಿ ನಾಗರಾಜ್ ವಸ್ತಾರೆ (Nagaraj Ramaswamy Vastarey) ಭಾವುಕರಾಗಿದ್ದಾರೆ.
ಅಪರ್ಣಾ ವಿಧಿವಶರಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಾಜ್ ವಸ್ತಾರೆ, ತುಂಬಾ ಖಾಸಗಿಯಾಗಿ ಬದುಕಿದವಳು ಅಪರ್ಣಾ, ಅಷ್ಟೇ ಖಾಸಗಿಯಾಗಿ ಬೀಳ್ಕೊಡಲು ಬಯಸುತ್ತೇನೆ. ಅವಳು ನನಗೆ ಸಲ್ಲೋದಕ್ಕೆ ಮುಂಚೇನೇ ಕರ್ನಾಟಕಕ್ಕೆ ಸೇರಿದವಳು. ಮಾಧ್ಯಮದವರ ಮುಂದೆಯೇ ನಿಂತು ಏನಾಯ್ತು ಅಂತಾ ಹೇಳಬೇಕು ಅನ್ನೋದು ಅವಳ ಆಸೆಯಾಗಿತ್ತು. ಅಷ್ಟನ್ನೇ ನಾನು ಹೇಳ್ತಿದ್ದೀನಿ ಎಂದರು.
ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್ (Lung cancer) ಇರುವುದು ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದಾಗ ವೈದ್ಯರು ಇನ್ನೂ 6 ತಿಂಗಳು ಬದುಕಿದರೆ ಹೆಚ್ಚು ಎಂದು ಹೇಳಿದ್ದರು. ಆದ್ರೆ ಅವಳು ಛಲಗಾತಿ, ಏನಾದರೂ ಗೆದ್ದೇ ಗೆಲ್ಲುತ್ತೇನೆ ಅನ್ನುವ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಹೋರಾಡಿದಳು. ಆದ್ರೆ ಕಳೆದ ಫೆಬ್ರವರಿ ತಿಂಗಳಿನಿಂದ ಸೋತಿದ್ದಳು. ಏಕೆಂದರೆ ಇದು ದೇಹವೇ ದೇಹವನ್ನು ಬಾಧಿಸುವ ವ್ಯಾಧಿ, ನಾನು ಅರಿತಿರುವ ಹಾಗೆಯೇ ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಹೇರಲು ಬಯಸುತ್ತೆ. ಅವಳು ಧೀರೆ, ಇಷ್ಟು ವರ್ಷ ಸಾಧ್ಯವಾದಷ್ಟೂ ಮಣಿಸಿದಳು. ಆದರೀಗ ನಾವಿಬ್ಬರೂ ಜಂಟಿಯಾಗಿ ಸೋತಿದ್ದೇವೆ ಎಂದು ಕಣ್ಣೀರಿಟ್ಟರು.
ಮುಂಬರುವ ಅಕ್ಟೋಬರ್ಗೆ 58 ವರ್ಷ ತುಂಬುತ್ತಿತ್ತು. ಅವಳ ದೇಹ ಅನ್ನೋದು ಮಾಯಕ ಅನ್ನೋದು ತೋರುತ್ತದೆ. ಏಕೆಂದರೆ ನಿಜವಾದ ವಯಸ್ಸನ್ನು ಯಾವತ್ತೂ ತೋರಿಸಲಿಲ್ಲ. 9:30ರ ಹೊತ್ತಿನಲ್ಲಿ ದೇಹ ತನ್ನನ್ನು ತಾನು ಹಿಂಪಡೆದುಕೊಂಡಿತು ಎಂದು ಭಾವುಕರಾದರು.