newsics.com
ನ್ಯೂಸಿಕ್ಸ್.ಕಾಮ್
ವಾರ ಭವಿಷ್ಯ
2024 ಆಗಸ್ಟ್ 11ರಿಂದ 17ರವರೆಗೆ
ಆಗಸ್ಟ್ ತಿಂಗಳ ಎರಡನೇ ವಾರ ಇದಾಗಿದ್ದು, ಈ ಸಮಯದಲ್ಲಿ ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಇರಲಿದ್ದಾನೆ. ಅಲ್ಲದೆ, ಸೂರ್ಯನು ಸಿಂಹರಾಶಿಯನ್ನು ಪ್ರವೇಶ ಮಾಡುವನು. ಅದು ಸ್ವರಾಶಿಯೂ ಆಗಿದ್ದು, ಕೆಲವು ರಾಶಿಯವರಿಗೆ ಅನೇಕ ಶುಭಫಲಗಳನ್ನು ನೀಡುವನು. ವಿಶೇಷವಾಗಿ, ಆರೋಗ್ಯವನ್ನು ನೀಡುವಂತೆ ಸೂರ್ಯನಲ್ಲಿ ಬೇಡುವುದು ಸೂಕ್ತ. ಆರೋಗ್ಯವೇ ಎಲ್ಲ ಸಂಪತ್ತು ಪಡೆಯಲು ಮೂಲ ಕಾರಣವಾಗಿದೆ.
—
ಮೇಷ
ಸೂರ್ಯನು ಪಂಚಮ ರಾಶಿಯನ್ನು ಪ್ರವೇಶಿಸುವನು. ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಉತ್ತಮ ಕಾಲವಾಗಿದೆ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಇರುವುದು ಮಾತಿನಿಂದ ಧನ, ಆರೋಗ್ಯ ಲಾಭವನ್ನೂ ಪಡೆಯಬಹುದು. ಮನೆಯವರಿಂದ ಧನ ಲಾಭವೂ ಆಗಲಿದೆ. ಸಂಗಾತಿಯ ವಿಷಯದಲ್ಲಿ ಮನಸ್ತಾಪ ಕಾಣಿಸುವುದು. ಸ್ನೇಹಿತ ಬಳಗ ದೊಡ್ಡದಾಗಲಿದೆ. ಯಾರನ್ನಾದರೂ ಅಪಮಾನ ಮಾಡಿಸುವುದು ಬೇಡ. ಪುನಃ ನಿಮಗೇ ಬರುವುದು. ಕ್ಷಮಾಗುಣವೇ ನಿಮಗೆ ಭೂಷಣವಾಗಲಿದೆ. ಅದನ್ನು ಉಳಿಸಿಕೊಳ್ಳುವುದು ಮುಖ್ಯ.
ವೃಷಭ
ಈ ವಾರ ನಿಮಗೆ ಮಿಶ್ರಫಲವಿದೆ. ಸ್ವರಾಶಿಯಲ್ಲಿ ಗುರು ಕುಜರು ಇದ್ದರೂ ನೆಮ್ಮದಿಯನ್ನು ಕಾಣುವುದು ಕಷ್ಟವಾಗುವುದು. ನಿರಂತರ ಪರಿಶ್ರಮದಿಂದ ಮತ್ತೆ ಮತ್ತೆ ಆಯಾಸಗೊಳ್ಳಬೇಕಾಗುವುದು. ನಿಮ್ಮ ನಡೆಯಲ್ಲಿ ಧೈರ್ಯವಿರುವುದು. ಯಾವುದೇ ಅಮೂಲ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಕಷ್ಟವಾಗುವುದು. ಬೇರೆಯವರಿಗೆ ಗೌರವ ಕೊಟ್ಟು ನೀವು ಪಡೆಯುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ವಿದೇಶದಿಂದ ಮರಳಿ ಬರಬಹುದು. ಸಂಗಾತಿಯಿಂದ ಕ್ಲೇಶವನ್ನು ಅನುಭವಿಸಬೇಕಾದೀತು. ಮಹಾದೇವಿಯನ್ನು ನಾನಾ ಪ್ರಕಾರವಾಗಿ ಆರಾಧಿಸಿ.
ಮಿಥುನ
ನಿಮಗೆ ಅಶುಭವೇ ಹೆಚ್ಚು ಕಾಣಿಸುವುದು. ಏನೋ ಮಾಡಲು ಹೋಗಿ ಕೊನೆಗೆ ನಿಮ್ಮ ಮೂಲಕ್ಕೇ ಬರುವುದು. ಯಾವುದನ್ನೂ ಸಹಿಸುವ ಮನಃಸ್ಥಿತಿ ನಿಮಗೆ ಇಲ್ಲ. ತಾಳ್ಮೆಯ ಕೊರತೆ ಬಹುವಾಗಿ ಕಾಣಿಸುವುದು. ಕುಟುಂಬದಲ್ಲಿ ನಿಮ್ಮನ್ನು ಆದರಿಸಲಾರರು. ನಿಮ್ಮ ಬಗ್ಗೆ ನಿಮಗೆ ಪೂರ್ಣವಾದ ಭರವಸೆ ಇರದೇ ಎಲ್ಲದಕ್ಕೂ ಹಿಂದೇಟು ಹಾಕುವಿರಿ. ಉದ್ಯೋಗದಲ್ಲಿ ನಿಮಗೆ ಖುಷಿ ಸಿಗದು. ಉದ್ವೇಗದಲ್ಲಿ ಸಂಬಂಧವನ್ನು ಕಳೆದುಕೊಳ್ಳುವಿರಿ. ನಿಮ್ಮ ಬಗ್ಗೆ ನಿಮಗೇ ಕೀಳರಿಮೆ ಕಾಣಿಸುವುದು. ವಿಷ್ಣುವಿನ ಆರಾಧನೆ ನಿಮಗೆ ಉತ್ಸಾಹ ತಂದುಕೊಡುವುದು.
ಕರ್ಕಾಟಕ
ಈ ರಾಶಿಯವರಿಗೆ ಶುಭ ಫಲವಿದೆ. ದಶಮಾಧಿಪತಿಯು ಏಕಾದಶದಲ್ಲಿ ಇದ್ದು ಉದ್ಯೋಗದಲ್ಲಿ ನೆಮ್ಮದಿಯನ್ನು, ಆದಾಯವನ್ನೂ ಹೆಚ್ಚಿಸುವನು. ಶತ್ರುಗಳಿಂದ ನೀವು ದೂರವಿರಬೇಕಾಗುವುದು. ಚಿಂತಿತ ಕಾರ್ಯವನ್ನು ಸಫಲ ಮಾಡಿಕೊಳ್ಳುವಿರಿ. ತಂದೆಯಿಂದ ಆರ್ಥಿಕ ಸಹಕಾರ ಸಿಗಲಿದೆ. ನಿಮ್ಮ ಆತ್ಮಬಲವು ತಗ್ಗುವುದು. ಸಂಗಾತಿಯ ಮಾತನ್ನು ನೀವು ಕೇಳಲಾರಿರಿ. ಯಾರಿಂದಲೂ ಗೌರವ ಸಿಗದೇ ಇರುವುದು ನಿಮ್ಮನ್ನು ಕುಗ್ಗಿಸಬಹುದು. ಮಕ್ಕಳಿಂದ ನಿಮಗೆ ಪ್ರೀತಿ ಸಿಗುವುದು. ಬೇಡದಿರುವ ವಸ್ತುಗಳನ್ನು ದೂರ ಮಾಡುವಿರಿ. ಅಂಬಿಕೆಯ ಉಪಾಸನೆ ಮಾಡಿ.
ಸಿಂಹ
ಈ ವಾರ ಮಿಶ್ರ ಫಲದ ಪ್ರಾಪ್ತಿಯಾಗಲಿದೆ. ಸೂರ್ಯನು ಸ್ವಗೃಹಕ್ಕೆ ಆಗಮಿಸುವ ಕಾರಣ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಚಿಕಿತ್ಸೆಯ ಮೂಲಕ ಪರಿಹಾರ ಮಾಡಿಕೊಳ್ಳಬೇಕಾಗುವುದು. ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡುವಿರಿ. ವೃತ್ತಿಯಲ್ಲಿ ನಿಮಗೆ ಬೇಕಾದ ಸಹಕಾರ ಸಿಗಲಿದೆ. ಅಮೂಲ್ಯ ವಸ್ತುಗಳನ್ನು ಹಾಳು ಮಾಡಿಕೊಳ್ಳುವಿರಿ. ಸುಂದರ ಸ್ಥಳಗಳಿಗೆ ಪ್ರವಾಸ ಹೋಗುವ ನಿರ್ಧಾರ ಮಾಡುವಿರಿ. ನಿಮ್ಮ ಮಾತು ಒರಟು ಹಾಗೂ ಅಸತ್ಯದಿಂದ ಕೂಡಿರಲಿದೆ. ಆದ ಕಾರಣ ಯಾರೂ ನಿಮ್ಮನ್ನು ಆದರಿಸಲು ಇಷ್ಟಪಡುವುದಿಲ್ಲ. ಸೂರ್ಯ ನಮಸ್ಕಾರವನ್ನು ಶ್ರದ್ಧಾಭಕ್ತಿಯಿಂದ ಮಾಡಿ.
ಕನ್ಯಾ
ಈ ರಾಶಿಯವರಿಗೆ ಈ ವಾರ ಶುಭಾಶುಭ ಫಲವಿದೆ. ಸೂರ್ಯನು ದ್ವಾದಶ ಸ್ಥಾನ ಹಾಗೂ ಸ್ವಕ್ಷೇತ್ರಕ್ಕೆ ಬರಲಿದ್ದಾನೆ. ರಾಶಿಯ ಅಧಿಪತಿಯೂ ದ್ವಾದಶದಲ್ಲಿ ಇರುವನು. ಭಯ, ಯಾವುದನ್ನು ಮಾಡುವುದಿದ್ದರೂ ಆತ್ಮವೇ ಹಿಂಜರಿಯುತ್ತದೆ. ಆದರೆ ಏನನ್ನೂ ಮಾಡಬಹುದು ಎಂಬ ವಿಶ್ವಾಸವೂ ಇರಲಿದೆ. ವೈವಾಹಿಕ ಜೀವನವನ್ನು ನಡೆಸಲು ಕಸರತ್ತು ಮಾಡಬೇಕಾಗುವುದು. ಸಂಗಾತಿಯನ್ನು ಸಮಾಧಾನದಿಂದ ಕರೆದೊಯ್ಯುವುದೇ ನಿಮಗೆ ಸವಾಲು. ಬಂಧುಗಳನ್ನು ಉಪಾಯದಿಂದ ಮನವೊಲಿಸುವಿರಿ. ಉದ್ಯಮದಲ್ಲಿ ಹಿನ್ನಡೆ, ಆರ್ಥಿಕ ನಷ್ಟವೂ ಆಗುವುದು. ಭೂಮಿಯ ವ್ಯವಹಾರ ಅಥವಾ ಖರೀದಿಗೆ ಅವಕಾಶವಿದೆ. ವಾಹನ ಬಗ್ಗೆ ಸುಮ್ಮನಿರುವುದು ಸೂಕ್ತ. ಗುರುಸೇವೆಯಿಂದ ಆಪತ್ತು ದೂರಾಗುವುದು.
ತುಲಾ
ಈ ರಾಶಿಯವರಿಗೆ ಈ ವಾರದಲ್ಲಿ ಅಶುಭ ಫಲವಿದೆ. ಸೂರ್ಯನು ಏಕಾದಶ ಸ್ಥಾನಕ್ಕೆ ಬಂದು ಸ್ಥಾನಮಾನ, ಗೌರವ, ಉದ್ಯೋಗದಲ್ಲಿ ಪ್ರಗತಿ, ಸರ್ಕಾರದ ಕಾರ್ಯದಲ್ಲಿ ಸಲೀಸಾಗಿ ಎಲ್ಲವೂ ಆದರೂ ನೆಮ್ಮದಿ ಪಡೆಯುವುದು ಕಷ್ಟವಾಗಿದೆ. ಎಲ್ಲಿಗೆ ಹೋದರೂ ಮಾನಸಿಕ ಕಿರಿಕಿರಿ ನಿಮ್ಮನ್ನು ಬಾಧಿಸುವುದು. ಎಲ್ಲರ ಮಾತುಗಳೂ ನಿಮಗೇ ಹೇಳಿದಂತೆ ಅನ್ನಿಸುವುದು. ಆದರೆ ಯಾರನ್ನೂ ದ್ವೇಷಿಸುವಂತಿಲ್ಲ. ಚಡಪಡಿಕೆಯಲ್ಲಿ ಇರುವಿರಿ. ಸತ್ಕಾರ್ಯಕ್ಕೆ ಸಂಪತ್ತು ವ್ಯಯವಾಗದು. ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇರದು. ಲಕ್ಷ್ಮೀನಾರಾಯಣರ ಉಪಾಸನೆ ಅಗತ್ಯ.
ವೃಶ್ಚಿಕ
ಇದು ರಾಶಿ ಚಕ್ರದ ಎಂಟನೇ ರಾಶಿ. ಈ ವಾರ ಶುಭ ಫಲವಿದೆ. ವೃತ್ತಿಯಲ್ಲಿ ತೊಡಗಿಕೊಳ್ಳಲು ಕಷ್ಟವಾದೀತು. ಆರ್ಥಿಕ ಸ್ಥಿತಿಯ ಬಗ್ಗೆ ಚೆಂತೆ ಕಾಡುವುದು. ಭಕ್ತಿಯು ಕಡಿಮೆ ಆಗಿದ್ದು, ಬೇರೆ ಚಟುವಟಿಕೆ ಹೆಚ್ಚಾಗುವುದು. ಸಂಗಾತಿಯನ್ನು ಅನುಸರಿಸುವಿರಿ. ಕಲಹಗಳು ದಾಂಪತ್ಯದಲ್ಲಿ ಕಡಿಮೆ ಆಗಲಿದೆ. ಸರ್ಕಾರದ ಉದ್ಯೋಗದಲ್ಲಿ, ಕಾರ್ಯದಲ್ಲಿ ಒಳ್ಳೆಯ ಹೆಸರನ್ನು ಪಡೆಯುವಿರಿ. ನಿಮ್ಮ ಯೋಜನೆಗಳಿಗೆ ಸರಿಯಾದ ರೂಪ ಸಿಗಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ನಿರ್ಲಕ್ಷ್ಯ ಬೇಡ. ವಿದೇಶದಿಂದ ಒಳ್ಳೆಯ ಸುದ್ದಿ ಸಿಗಲಿದೆ. ವಾಹನದಿಂದ ಶರೀರಕ್ಕೆ ತೊಂದರೆ ಆಗುವುದು. ಮಹಾಗೌರಿಯನ್ನು ಆರಾಧಿಸಿ.
ಧನುಸ್ಸು
ಈ ರಾಶಿಯವರಿಗೆ ಈ ವಾರದಲ್ಲಿ ಅಶುಭ. ನಿಮ್ಮ ನೆಮ್ಮದಿ ಸುಖಕ್ಕೆ ಬಂಧುಗಳಿಂದ ತೊಂದರೆ ಬರಲಿದೆ. ಒರಟು ಮಾತುಗಳನ್ನು ಆಡಬೇಕಾಗುವುದು. ಸಜ್ಜನರ ವೈರವನ್ನು ಬೆಳೆಸಿಕೊಳ್ಳುವಿರಿ. ವೈವಾಹಿಕ ಸಂಬಂಧವು ಬಂಧುಗಳಿಂದ ತಪ್ಪಿಹೋಗುವುದು. ವೃತ್ತಿಯಲ್ಲಿ ನಿಮಗೆ ಅಸಮಾಧಾನ, ಯಾರ ಮಾತನ್ನು ಕೇಳಬೇಕು ಎನ್ನುವ ಗೊಂದಲ. ಮನೆಯಲ್ಲಿಯೂ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವಾಗುವುದು. ದೈವಾನುಗ್ರಹ ಕಡಿಮೆ ಇರವುದು. ಧಾರ್ಮಿಕ ಆಚರಣೆಗಳನ್ನು ಬುದ್ಧಿಪೂರ್ವಕವಾಗಿ ಮಾಡಬೇಕಾಗುವುದು. ಗುರುವಾರ ಗುರುಚರಿತ್ರೆ ಪಠಿಸಿ.
ಮಕರ
ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಶುಭವಾಗಲಿದೆ. ರಾಶಿಯ ಅಧಿಪತಿಯು ದ್ವಿತೀಯದಲ್ಲಿ ಉಚ್ಚಸ್ಥಾನದಲ್ಲಿ ಇದ್ದು ಆರ್ಥಿಕ ತೊಂದರೆಯನ್ನು ನಿಭಾಯಿಸುವನು. ಸರ್ಕಾರದಿಂದ ಬರುವ ಆದಾಯವು ನಿಮಗೆ ಸಿಗಲಿದೆ. ಶುಕ್ರನು ಅಸ್ತನಾದ ಕಾರಣ ಸಂಗಾತಿಯ ಜತೆ ಹೊಂದಾಣಿಕೆ ಕಷ್ಟವೆನಿಸುವುದು. ಉದ್ಯೋಗದಲ್ಲಿ ನೀವು ಖುಷಿಯಿಂದ ಕೆಲಸ ಮಾಡಲಾಗದು. ಏನಾದರೂ ಕಿರಿಕಿರಿ ನಿಮ್ಮಲ್ಲಿ ಇರುವುದು. ಮಕ್ಕಳಿಂದ ಆರ್ಥಿಕ ನೆರವನ್ನು ಪಡೆಯುವುದೂ ಆಗುತ್ತದೆ. ನೀವು ಅಂದುಕೊಂಡಷ್ಟು ಆದರಾತಿಥ್ಯ ಸಿಗದು. ಶಿವನನ್ನು ಅಭಿಷೇಕದಿಂದ ಆರಾಧಿಸಿ.
ಕುಂಭ
ಆಗಸ್ಟ್ ತಿಂಗಳ ಎರಡನೇ ವಾರ ನಿಮಗೆ ಅಧಿಕ ಶುಭವಿದ್ದರೂ ತಂದೆ ಮಕ್ಕಳಲ್ಲಿ ವೈಷಮ್ಯ ಉಂಟಾಗುವುದು. ಸ್ವಪ್ರತಿಷ್ಠೆಯಿಂದ ಸಂಬಂಧವು ಕೆಡುವುದು. ಸೂರ್ಯನು ಈ ವಾರ ಸ್ವರಾಶಿಗೆ ವರ್ಷಗಳ ನಂತರ ಪ್ರವೇಶಿಸಿದ್ದಾನೆ. ಗುರುಬಲ ಪೂರ್ಣವಾಗಿ ನಿಮಗೆ ಇಲ್ಲ. ಆದ ಕಾರಣ ಯಾವುದೇ ನಕಾರಾತ್ಮಕ ಅಂಶಗಳನ್ನು ಬೆಳೆಯಲು ಬಿಡುವುದು ಬೇಡ. ದಾಂಪತ್ಯದಲ್ಲಿ ಕೂಡ ಮನಸ್ತಾಪ ಬರುವುದು. ತಾಳ್ಮೆಯಿಂದ ಒಂದೊಂದಾಗಿ ದಾಟಲು ಪ್ರಯತ್ನಿಸಿ. ಹನುಮಾನ್ ಚಾಲಿಸ್ ಪಠಣವು ನಿಮ್ಮಲ್ಲಿ ಧೈರ್ಯವನ್ನು, ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
ಮೀನ
ಈ ತಿಂಗಳ ಎರಡನೇ ವಾರ ನಿಮಗೆ ಮಿಶ್ರಫಲ. ಸೂರ್ಯನು ಕರ್ಕಾಟಕ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಶುಕ್ರ ಹಾಗೂ ಬುಧ ಇದೇ ರಾಶಿಯಲ್ಲಿ ಇರುವುದರಿಂದ ಶುಕ್ರಾಸ್ತವಾದ ಕಾರಣ ಸಂಗಾತಿಯ ಮಾತಿಗೆ ಅನಾದರ ತೋರಿಸುವಿರಿ. ಬುದ್ಧಿವಂತಿಕೆಯಿಂದ ನಿಭಾಯಿಸುವ ಅವಶ್ಯಕತೆ ಇರುವುದು. ವಿವಾಹ ಕಾರ್ಯದಲ್ಲಿ ಹಿನ್ನಡೆಯಾಗಲಿದೆ. ಅನಗತ್ಯ ಆಲೋಚನೆಯನ್ನು ಪ್ರಯತ್ನ ಪೂರ್ವಕವಾಗಿ ಬಿಡಬೇಕಾದೀತು. ಭೂ ವಿವಾದವನ್ನು ಹೋರಾಟದ ಮೂಲಕ ಗೆಲ್ಲುವಿರಿ. ಉತ್ತಮ ಸ್ನೇಹಿತರು ನಿಮಗೆ ಸಿಗುವರು. ಆರೋಗ್ಯವು ವ್ಯತ್ಯಾಸವಾಗುತ್ತಲೇ ಇರುವುದು. ನಾಗ ದೇವರ ಉಪಾಸನೆ ಮಾಡಿ.