newsics.com
ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರು ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ.
ಸದ್ಯ ಕಾವೇರಿ ನಿವಾಸದಲ್ಲೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಸಿಎಂ ನಿವಾಸದಲ್ಲಿ ಕಾನೂನು ಹೋರಾಟದ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಕಾನೂನು ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಸಿದ್ದರಾಮಯ್ಯನವರು ಕಾನೂನು ತಜ್ಞರ ಜತೆ ಚರ್ಚಿಸಿದ್ದರು. ಇದೀಗ ಮತ್ತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಗುಪ್ತಚರ ಇಲಾಖೆ ಮುಖ್ಯಸ್ಥ ಶರತ್ ಚಂದ್ರ ಜತೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ಬಗ್ಗೆ ಚರ್ಚಿಸುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರ ಅನುಮತಿ ನೀಡಿರುವ ಹಿನ್ನೆಲೆ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಾಸಿಕ್ಯೂಷನ್ ಆರಂಭವಾಗಲಿದೆ. ಸಿಎಂ ತನಿಖೆ ಅಥವಾ ಕೋರ್ಟ್ ವಿಚಾರಣೆ ಎದುರಿಸಬೇಕಾಗುವುದು. ದೂರುದಾರರಾದ ವಕೀಲ ಟಿ.ಜೆ. ಅಬ್ರಹಾಂ, ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ನೀಡಿರುವ ಈ ಖಾಸಗಿ ದೂರಿಗೆ ರಾಜ್ಯಪಾಲರ ಪೂರ್ವಾನುಮತಿಯ ಬಲ ಸಿಗಲಿದೆ.
ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಅನುಮತಿಯ ವಿಚಾರವೂ ಪ್ರಸ್ತಾಪವಾಗಿತ್ತು. ಅನುಮತಿ ನೀಡಿರುವುದರಿಂದ ಕೋರ್ಟ್ ಆದೇಶ ಮಹತ್ವ ಪಡೆಯಲಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ 3 ಸಾಧ್ಯತೆಗಳಿವೆ. ಮೊದಲನೆಯದು ಮೇಲ್ನೋಟಕ್ಕೆ ಆರೋಪ ಕಂಡುಬಂದರೆ ತನಿಖೆಗೆ ಆದೇಶಿಸಬಹುದು. ಎರಡನೆಯದು ತಾವೇ ಪರಿಜ್ಞಾನಕ್ಕೆ ಪಡೆದು ಸಿಎಂಗೆ ಸಮನ್ಸ್ ಜಾರಿಗೊಳಿಸಬಹುದು. ಮೂರನೆಯದು ಮೇಲ್ನೋಟಕ್ಕೆ ದೂರಿನಲ್ಲಿ ಸತ್ಯಾಂಶವಿಲ್ಲ ಎನ್ನಿಸಿದರೆ ಖಾಸಗಿ ದೂರು ವಜಾಗೊಳಿಸಬಹುದು.
ಮುಡಾ ಪ್ರಕರಣ: ಸಿಎಂ ವಿರುದ್ಧ ಪ್ರಕರಣ ದಾಖಲಿಸಲು ರಾಜ್ಯಪಾಲರಿಂದ ಅನುಮತಿ, ಸಿದ್ದರಾಮಯ್ಯಗೆ ಹೆಚ್ಚಿದ ಸಂಕಷ್ಟ
https://www.newsics.com/2024/08/17/increased-end-of-life-case-metro-rail-travel-likely-to-be-expensive-3/