newsics.com
ನ್ಯೂಸಿಕ್ಸ್.ಕಾಮ್
ವಾರ ಭವಿಷ್ಯ
25-08-2024ರಿಂದ 31-08-2034 ರವರೆಗೆ
ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಸೂರ್ಯನು ಸಿಂಹದಲ್ಲಿ ಇರುವನು. ಕುಜನೂ ನೀಚಗಾಮಿಯಾಗಿ ಶತ್ರುಸ್ಥಾನಕ್ಕೆ ಬಂದಿದ್ದಾನೆ. ಶುಕ್ರನು ನೀಚನಾಗಿ ತನ್ನ ಎಲ್ಲ ಶುಭಪ್ರದವಾದ ಕೊಡುಗೆ ನೀಡಲು ಅಸಮರ್ಥನಾಗಿದ್ದಾನೆ. ಬುಧನು ಸ್ವಕ್ಷೇತ್ರಕ್ಕೂ, ಉಚ್ಚ ಕ್ಷೇತ್ರಕ್ಕೂ ಪ್ರವೇಶಿಸುವ ಯೋಚನೆಯಲ್ಲಿದ್ದಾನೆ. ಎರಡು ಗ್ರಹಗಳು ಶುಭವನ್ನೂ ಉಳಿದವು ಅಶುಭವನ್ನೂ ನೀಡಲಿವೆ. ಎಲ್ಲರೂ ಇಷ್ಟದೇವರನ್ನು ಸ್ಮರಿಸುವುದು ಉತ್ತಮ.
ಮೇಷ
ನಿಮಗೆ ಶುಭಪ್ರದವಾದ ಸುದ್ದಿಗಳೇ ಹೆಚ್ಚಿವೆ. ಗುರುವು ದ್ವಿತೀಯದಲ್ಲಿದ್ದು ನಿಮ್ಮ ಮಾತು ನಡೆಯುವಂತೆ ಮಾಡುವನು. ದ್ವಿತೀಯ ಹಾಗೂ ಸಪ್ತಮಾಧಿಪತಿ ಶುಕ್ರ ಷಷ್ಠದಲ್ಲಿ ಇರುವುದರಿಂದ ಸಂಗಾತಿಯ ಮಾತನ್ನು ಕೇಳಲಾರಿರಿ. ನಿಮ್ಮದೇ ದಾರಿಯಲ್ಲಿ ಸಾಗುವಿರಿ. ಹಣದ ಉಳಿತಾಯ ಕಷ್ಟವಾಗುವುದು. ಯಾವುದೋ ಕಾರ್ಯಕ್ಕೆ ಖರ್ಚು ಮಾಡಿ ಅಥವಾ ಹೂಡಿಕೆ ಮಾಡಿ ಶೂನ್ಯಕ್ಕೆ ಬರುವಿರಿ. ತಂದೆಯ ಮೇಲಿನ ಪ್ರೀತಿ ಹೆಚ್ಚುವುದು. ಸುಬ್ರಹ್ಮಣ್ಯನೇ ನಿಮ್ಮನ್ನು ಅನವರತ ಕಾಯುವುದು.
ವೃಷಭ
ಈ ರಾಶಿಯವರಿಗೆ ಈ ವಾರ ಸಾಮಾನ್ಯ ಫಲಡ ಸಿಗಲಿದೆ. ರಾಶಿಯ ಅಧಿಪತಿ ಷಷ್ಠಸ್ಥಾನದ ಅಧಿಪತಿ ಶುಕ್ರ ನೀಚನಾಗಿ ನಿಮ್ಮ ಸಾಂಸಾರಿಕ ಜೀವನವು ಕಷ್ಟವಾಗುವಂತೆ ಮಾಡುವನು. ದಾಂಪತ್ಯದಲ್ಲಿ ಶತ್ರುಭಾವವು ಬರುವುದು. ಸಂಗಾತಿಯ ಮಾತುಗಳು ನಿಮಗೆ ಸುಖಪ್ರದವಾಗದು. ಸುಳ್ಳಾಡುವ ಸಾಧ್ಯತೆ ಇದೆ. ನವಮ ಮತ್ತು ಏಕಾದಶದ ಅಧಿಪತಿಯಾದರೂ ಶತ್ರುವಿನ ಮನೆಯಲ್ಲಿದ್ದು ವ್ಯಕ್ತಿಗಳ, ವಸ್ತುಗಳ ಮೌಲ್ಯವು ಗೊತ್ತಾಗದು. ಯಾರನ್ನು ಯಾವುದಕ್ಕೆ ಬಳಸಿಕೊಳ್ಳಬೇಕು ಎನ್ನುವ ಜ್ಞಾನ ಇರದು. ಸ್ವಾಭಿಮಾನವನ್ನು ಕಳೆದುಕೊಳ್ಳುವಿರಿ. ದೈವಭಕ್ತಿಯಲ್ಲಿ ಹೆಚ್ಚು ಸಮಯ ತೊಡಗಿ.
ಮಿಥುನ
ನಿಮಗೆ ಈ ವಾರ ಅಶುಭದ ವಾರವಾಗಿರುವುದು. ಸ್ವರಾಶಿಯ ಅಧಿಪತಿ ಹಾಗೂ ಚತುರ್ಥಾಧಿಪತಿ ತೃತೀಯದಲ್ಲಿ ಇದ್ದು ಕುಟುಂಬ ಸೌಖ್ಯವನ್ನು ಕೆಡಿಸುವನು. ಕುಜನೂ ಈ ವಾರ ಇದೇ ರಾಶಿಗೆ ಬರುವ ಕಾರಣ ಒತ್ತಡ ಹೆಚ್ಚು ಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಪ್ರಗತಿ ಇರದು. ಎಷ್ಟು ಮಾಡಿದರೂ ಇಷ್ಟೇ ಎಂಬ ಭಾವ ನಿಮಗೆ ಕಾಣಿಸುವುದು. ವೈವಾಹಿಕ ವಿಚಾರಕ್ಕೆ ತಡೆಗಳು ಅಧಿಕವಾಗಿ ಕಾಣಿಸುವುದು. ಹಿರಿಯ ಮಾತುಗಳು ನಿಮಗೆ ಸಮಾಧಾನ ತರದು. ಅವರ ಮಾತನ್ನು ತತ್ಸಾರದಿಂದ ಕಾಣುವಿರಿ. ಧೈರ್ಯವು ನಿಮ್ಮ ಮುನ್ನಡೆಗೆ ಕಾರಣವಾಗಲಿದೆ. ಮಕ್ಕಳ ಕಾರಣಕ್ಕೆ ಧನವ್ಯಯವಾಗಲಿದೆ. ಲಕ್ಷ್ಮೀನಾರಾಯಣರ ಅನುಗ್ರಹ ಅವಶ್ಯ.
ಕರ್ಕಾಟಕ
ಈ ರಾಶಿಯಲ್ಲಿರುವ ನಿಮಗೆ ಶುಭ ಫಲವಿದೆ. ಏಕಾದಶದ ಗುರುವು ನಿಮಗೆ ಸಕಲಕಂಟಕಗಳನ್ನು ದೂರ ಮಾಡಿ ನೆಮ್ಮದಿ ಕೊಡುವನು. ತಂದೆಯಿಂದ ನಿಮಗೆ ಶುಭವು ಸಿಗಲಿದೆ. ಪಂಚಮ ಮತ್ತು ದಶಮಾಧಿಪತಿಯು ದ್ವಾದಶಕ್ಕೆ ಬರಲಿದ್ದು ನಿಮಗೆ ಔದ್ಯೋಗಿಕ ತೊಂದರೆಯ ಜತೆ ಮಕ್ಕಳಿಂದ ನಿಮಗೆ ಸಿಗುವ ಆದರಗಳು ಕಡಿಮೆಯಾಗಲಿವೆ. ಏಕಾದಶಾಧಿಪತಿಯೂ ಚತುರ್ಥಾಧಿಪತಿಯೂ ಆದ ಶುಕ್ರನು ತೃತೀಯದಲ್ಲಿ ಇದ್ದು, ಈ ವಾರದಲ್ಲಿ ನಿಮಗೆ ಕಡಿಮೆ ಆದಾಯ ಸಿಗಲಿದೆ. ಕೌಟುಂಬಿಕವಾದ ಸಹಕಾರ, ತಾಯಿಯ ವಾತ್ಸಲ್ಯ ಕಡಿಮೆ ಆಗುವುದು. ಮಾತನ್ನು ಕಟುವಾಗಿ ಆಡುವಿರಿ. ಮಂಗಳಗೌರಿಯನ್ನು ತದೇಕಚಿತ್ತದಿಂದ ಧ್ಯಾನಿಸಿ.
ಸಿಂಹ
ನಿಮಗೆ ಆಗಸ್ಟ್ ತಿಂಗಳ ಕೊನೆಯ ವಾರ ಶುಭಾಶುಭ ಮಿಶ್ರಫಲ ನೀಡಲಿದೆ. ರಾಶಿಯ ಅಧಿಪತಿ ಸ್ವರಾಶಿಯಲ್ಲಿಯೇ ಇರುವ ಕಾರಣ ಆರೋಗ್ಯದ ಬಗ್ಗೆ ಗಮನ ಬೇಕು. ಕೋಪಗೊಳ್ಳುವಿಕೆ ಅಧಿಕವಾಗಿರುವುದು. ತಾಳ್ಮೆಯಿಂದ ಇರುವುದು ಅಸಾಧ್ಯವೆನಿಸುವುದು. ಆದರೆ ನಿಮಗೆ ಈ ವಾರ ಸರ್ಕಾರದ ಕಾರ್ಯಗಳನ್ನು ಮುಗಿಸಿಕೊಳ್ಳಲು ಅವಕಾಶವಿದೆ. ಔಷಧ ವ್ಯಾಪಾರಿಗಳಿಗೆ ಶುಭ. ದ್ವಿತೀಯದಲ್ಲಿ ಶುಕ್ರನು ನಿಮಗೆ ಶುಭಕರವಲ್ಲ. ಮಾತಿನಲ್ಲಿ ಗೊಂದಲ ಹೆಚ್ಚಿರುವುದು. ಔದ್ಯೋಗಿಕ ವಿಚಾರದಲ್ಲಿ ನಿಮಗೆ ತೃಪ್ತಿ ಇರದು. ಖಾಸಗಿ ಸಂಸ್ಥೆಯಲ್ಲಿ ಇರುವವರಿಗೆ ಉದ್ಯೋಗದ ವಿಚಾರದಲ್ಲಿ ಭಯವಿರುವುದು. ಮಕ್ಕಳಿಂದ ಅಡಮಾನ ಆಗುವುದು. ಆದಿತ್ಯ ಹೃದಯ ಸ್ತೋತ್ರ ಪಠಿಸಿ.
ಕನ್ಯಾ
ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿ ಹಾಗೂ ದಶಮಾಧಿಪತಿ ಬುಧ ಏಕಾದಶಿ ಸ್ಥಿತನಾಗಿದ್ದಾನೆ. ಸಾಹಿತ್ಯ ಕ್ಷೇತ್ರದವರಿಗೆ ಗೌರವ, ಹೆಚ್ಚಿನ ಸ್ಥಾನ, ಆದಾಯದಲ್ಲಿ ವೃದ್ಧಿ ಅಥವಾ ಆದಾಯ ಮೂಲಗಳು ಬದಲಾಗುವುದು. ಬಟ್ಟೆ, ಆಹಾರದ ಉದ್ಯಮದಲ್ಲಿ ಹೆಚ್ಚು ಲಾಭವಿರಲಿದೆ. ಕುಟುಂಬದಲ್ಲಿ ನೆಮ್ಮದಿ, ಸಂಗಾತಿಯಿಂದ ನಿಮಗೆ ಆಗಬೇಕಾದ ಕಾರ್ಯಗಳು ಯಾವುದೇ ಪ್ರೀತಿಯಿಂದ ಈ ವಾರ ಆಗುವುದು. ಮಕ್ಕಳ ವಿಚಾರದಲ್ಲಿ ನಿಮಗೆ ಸಮಾಧಾನ ಸಿಗದು. ಇದೆಲ್ಲದರ ನಡುವೆ ನಿಮ್ಮ ಮನಸ್ಸಿನ ಆರೋಗ್ಯದ ಬಗ್ಗೆಯೂ ಗಮನ ಅಗತ್ಯ. ನಾಗದೇವರ ಉಪಾಸನೆ ಮಾಡಿ.
ತುಲಾ
ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಅಶುಭ. ರಾಶಿಯ ಅಧಿಪತಿ ಹಾಗೂ ಅಷ್ಟಮಾಧಿಪತಿ ಶುಕ್ರ ದ್ವಾದಶ ಭಾವದಲ್ಲಿ ಇದ್ದಾನೆ. ಆರ್ಥಿಕತೆಯಲ್ಲಿ ಬಹಳ ಹಿನ್ನಡೆಯಾಗಲಿದೆ. ಆರ್ಥಿಕ ಮೂಲವಾದ ಎಲ್ಲ ಕಾರ್ಯಗಳೂ ಸ್ಥಗಿತಗೊಳ್ಳುವುದು. ಈ ವಾರದಲ್ಲಿ ನೀವು ಅನಿರೀಕ್ಷಿತ ಸಾಲವನ್ನೂ ಮಾಡಿಕೊಳ್ಳುವಿರಿ. ಉದ್ಯಮಿಗಳಿಗೆ ಹೊಂದಾಣಿಕೆ ಕಷ್ಟವಾಗುವುದು. ಒತ್ತಡದಲ್ಲಿ ಇರುವ ನಿಮಗೆ ಸಂಗಾತಿಯಿಂದ ಸಾಂತ್ವನ ಸಿಗುವುದು. ಶತ್ರುಗಳ ಪೀಡೆಯಿಂದ ಈ ವಾರ ಸೋಲನ್ನು ಕಾಣಬೇಕಾಗುವುದು. ಅಭಯದಾಯಿನಿಯಾದ ಜಗನ್ಮಾತೆಯನ್ನು ಧ್ಯಾನಿಸಿ.
ವೃಶ್ಚಿಕ
ಈ ರಾಶಿಯವರಿಗೆ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಶುಭವಿದೆ. ದ್ವಿತೀಯ ಹಾಗೂ ಪಂಚಮಾಧಿಪತಿಯು ಸಪ್ತಮದಲ್ಲಿ ಇರುವ ಕಾರಣ ಮಾತಿನಿಂದ ಸಂಗಾತಿಯನ್ನು ಪಡೆಯುವಿರಿ. ನಿಮ್ಮ ಸಂಪತ್ತನ್ನು ನೋಡಿ ವಿವಾಹವು ಕೂಡಿಬರುವುದು. ವಿದ್ಯೆಯೂ ನಿಮ್ಮ ವಿವಾಹಕ್ಕೆ ಪೂರಕವಾಗಲಿದೆ. ಕುಜನು ರಾಶಿಯ ಅಧಿಪತಿಯೂ ಷಷ್ಠಾಧಿಪತಿಯೂ ಆದ ಕಾರಣ ಆರೋಗ್ಯವು ಚೆನ್ನಾಗಿ ಆಗುವುದು. ಶಸ್ತ್ರಚಿಕಿತ್ಸೆ ನಡೆಸಬೇಕಾದ ಸ್ಥಿತಿ ಬರುವುದು. ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ನೀವು ಈ ವಾರ ಬರುವ ಸಂಪತ್ತಿಗೆ ಕಾಯಬೇಕಾಗುವುದು. ಸಂತಾನಕ್ಕೆ ದೋಷವು ಕಾಡುವುದು. ಸುಬ್ರಹ್ಮಣ್ಯ ದೇಗುಲದಲ್ಲಿ ಪೂಜೆ ಸಲ್ಲಿಸಿ.
ಧನು
ಈ ರಾಶಿಯವರಿಗೆ ಈ ವಾರ ಶುಭಾಶುಭ ಫಲವಿದೆ. ರಾಶಿಯ ಅಧಿಪತಿಯೂ ಚತುರ್ಥಾಧಿಪತಿಯೂ ಆದ ಗುರುವು ಷಷ್ಠದಲ್ಲಿ ಶತ್ರುವಿನ ಮನೆಯಲ್ಲಿ ಇದ್ದಾನೆ. ತಾಯಿಯಿಂದ ಸಿಗುವ ಪ್ರೀತಿ ಇರದು. ಮನೆಯ ನೆಮ್ಮದಿ ಅಷ್ಟಕ್ಕಷ್ಟೇ. ವಿದೇಶದಲ್ಲಿ ಇದ್ದವರಿಗೆ ಸಂಕಷ್ಟ. ವಿದೇಶಕ್ಕೆ ಹೋಗಲು ಬಯಸಿದರೂ ಆಸೆ ಈಡೇರದು. ಸಂಗಾತಿಯು ನಿಮ್ಮ ಮಾತನ್ನು ಕೇಳುವಳು. ಈ ವಾರ ಬಂಧುಗಳಿಗೆ ನೀವು ಇಷ್ಟವಾಗುವಿರಿ. ಆದರೂ ಸಣ್ಣ ಕಿರಿಕಿರಿಗಳು ಇರುವುದು. ನೀರು, ಅಗ್ನಿ, ವಿದ್ಯುತ್ ಇದಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ಶ್ರೇಯಸ್ಸು ಇರುವುದು. ಗುರುಚರಿತ್ರೆಯ ಪಠಣ ಮಾಡಿ.
ಮಕರ
ಈ ರಾಶಿಯವರಿಗೆ ಆಗಸ್ಟ್ ಕೊನೆಯ ವಾರ ಶುಭವಿದೆ. ರಾಶಿಯ ಅಧಿಪತಿ ಸ್ವಕ್ಷೇತ್ರದಲ್ಲಿ ಇರುವ ಕಾರಣ ಸಂಪತ್ತು ಎಲ್ಲಿಯೂ ಹೋಗದು. ಸಿಗಬೇಕಾದುದು ಸಿಗುತ್ತದೆ. ತೃತೀಯ ಹಾಗೂ ಏಕಾದಶಾಧಿಪತಿ ಗುರು ಪಂಚಮದಲ್ಲಿ ಇರುವನು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವ ಪ್ರಸಂಗ ಬರಲಿದೆ. ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ನಿಮಗೆ ಇಷ್ಟವಾಗುವುದು.
ಕುಂಭ
ಈ ವಾರದಲ್ಲಿ ಹನ್ನೊಂದನೇ ರಾಶಿಯವರಿಗೆ ಮಿಶ್ರಫಲ. ತೃತೀಯ ಹಾಗೂ ದಶಮಾಧಿಪತಿಯು ಪಂಚಮದಲ್ಲಿ ಇರುವನು. ಉದ್ಯೋಗವನ್ನು ನಿಮ್ಮ ಸಾಮರ್ಥ್ಯದಿಂದ ಪಡೆಯಬೇಕು. ಯಾರದೇ ಪ್ರಭಾವವೂ ನಡೆಯದು. ತಂದೆಯೇ ನಿಮಗೆ ಶತ್ರುಗಳಂತೆ ಕಾಣಿಸುವರು. ಇಬ್ಬರೂ ತಮ್ಮ ಶ್ರೇಷ್ಠತ್ವಕ್ಕೆ ಕಚ್ಚಾಡುವರು. ಚತುರ್ಥ ಹಾಗೂ ನವಮಾಧಿಪತಿಯು ನೀಚನಾಗಿ ಅಷ್ಟಮದಲ್ಲಿರುವನು. ಎಲ್ಲವೂ ಕನ್ನಡಿಯ ಒಳಗಿನ ಗಂಟು. ಯಾವುದನ್ನೂ ಅನುಭವಿಸುವ ಯೋಗವಿರದು. ವಾಹನ ಸಂಚಾರದಿಂದ ಆದಷ್ಟು ದೂರವಿರುವುದು ಸೂಕ್ತ. ಶುದ್ಧ ಗೋವಿನ ದಾನದಿಂದ ನಿಮಗೆ ಶುಭವಿದೆ.
ಮೀನ
ಈ ರಾಶಿಯವರಿಗೆ ಮಿಶ್ರಫಲವಿದೆ. ದ್ವಿತೀಯ ಹಾಗೂ ನವಮಾಧಿಪತಿಯಾದ ಕುಜನು ಚತುರ್ಥಸ್ಥಾನವನ್ನು ಪ್ರವೇಶಿಸುವನು. ತಾಯಿಯ ಜತೆ ಸಂಬಂಧವು ಅಷ್ಟಕ್ಕಷ್ಟೇ ಇರಲಿದೆ. ಕೌಟುಂಬಿಕವಾದ ಯಾವುದೇ ಬಂಧವು ನಿಮಗೆ ಇರದು. ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಯೋಚನೆ ಬರುವುದು. ತೃತೀಯ ಹಾಗೂ ಅಷ್ಟಮಾಧಿಪತಿ ಶುಕ್ರನು ಸಪ್ತಮದಲ್ಲಿರುವನು. ಎಲ್ಲವೂ ಇದ್ದೂ ಮಾನಸಿಕವಾಗಿ ನಿಮಗೆ ನೆಮ್ಮದಿ ಇರದು. ಸಂಗಾತಿಯ ವಿಚಾರದಲ್ಲಿ ಅಪನಂಬಿಕೆ, ಅಂದುಕೊಂಡಿದ್ದು ನೆರವೇರದು. ದೈವಾನುಗ್ರಹದ ಅಭಾವವು ಇದಕ್ಕೆಲ್ಲ ಕಾರಣ. ಇಷ್ಟದೇವರನ್ನು ಅನನ್ಯ ಭಕ್ತಿಯಿಂದ ಪೂಜಿಸಿ.