newsics.com
ಸುಳ್ಯ(ದಕ್ಷಿಣ ಕನ್ನಡ): ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಬೆಂಗಳೂರು ಮನೆಗೆ ಮಲೆನಾಡ ಗಿಡ್ಡ ತಳಿಯ ಹಸುಗಳನ್ನು ತರಲಾಗಿದೆ.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಮ್ಮ ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಜಾನುವಾರು ಸಾಕಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಈ ನಾಟಿ ಹಸುಗಳನ್ನು ಸುಳ್ಯದಿಂದ ಕಳುಹಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ನಿರ್ದೇಶನದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಪಶುಪಾಲನಾ ಕೇಂದ್ರ ಸಂಪರ್ಕಿಸಿದ ಅಧಿಕಾರಿಗಳು ‘ಮಲೆನಾಡು ಗಿಡ್ಡ’ ತಳಿಯ ಬಗ್ಗೆ ವಿಚಾರಿಸಿದ್ದರು. ಆದರೆ, ಅಲ್ಲಿಂದ ರೈತರಿಗೆ ಮಾತ್ರ ಜಾನುವಾರುಗಳ ವಿತರಣೆ ಮಾಡಲು ಅವಕಾಶ ಇದೆ. ಹೀಗಾಗಿ ಅಲ್ಲಿಯ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಅವರು ರೈತ ಅಕ್ಷಯ ಆಳ್ವ ಅವರನ್ನು ಸಂಪರ್ಕಿಸಿದರು.
ಅಲೆಕ್ಕಾಡಿಗೆ ಭೇಟಿ ನೀಡಿದ ಅಧಿಕಾರಿಗಳು ‘ಹಂಸಿ’ ಎನ್ನುವ ಐದು ವರ್ಷದ ಗೋವು, ಅದರ ಕರು ಪಂಚಮಿ ಹಾಗೂ ಬಾಳುಗೋಡು ರಾಜಶೇಖರ ಭಟ್ ಎಂಬುವರಿಗೆ ಅಕ್ಷಯ ಆಳ್ವ ಅವರು ನೀಡಿದ್ದ ಎರಡೂವರೆ ವರ್ಷದ ಸ್ವರ್ಣಕಪಿಲೆ ಹಸು, ಕರು ಸೇರಿದಂತೆ ಎರಡು ಹಸು ಮತ್ತು ಎರಡು ಕರುಗಳನ್ನು ಗೊತ್ತುಪಡಿಸಿದರು. ಈ ಹಸುಗಳನ್ನು ಶಾಲಿನಿ ರಜನೀಶ್ ಖರೀದಿಸಿದ್ದು, ಅವುಗಳನ್ನು ಪೂಜೆ ಸಲ್ಲಿಸಿ ತಮ್ಮ ಮನೆಗೆ ಬರಮಾಡಿಕೊಂಡಿದ್ದಾರೆ.
ನಾಟಿ ಹಸು ಸಾಕಣೆ ಅವಸಾನದಂಚಿನಲ್ಲಿರುವಾಗ ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಮ್ಮ ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಹಸು ಸಾಕಣೆಗೆ ಮುಂದಾಗಿರುವುದು ಶ್ಲಾಘನೀಯ ಎಂಬ ಮಾತು ವ್ಯಾಪಕವಾಗಿದೆ.
ಪ್ರತಿ ದಿನ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ? ಹಾಗಾದ್ರೆ ಈ ಸಮಸ್ಯೆ ಕಾಡಬಹುದು ಎಚ್ಚರ