newsics.com
ಮತ್ತೆ ಗಣೇಶನ ಹಬ್ಬ ಬಂದಿದೆ. ಎಲ್ಲೆಡೆ ಹಬ್ಬದ ಸಿದ್ಧತೆ ಸಡಗರದಿಂದ ನಡೆಯುತ್ತಿದೆ. ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಕೆಲವೊಂದು ಮನೆಗಳಲ್ಲಿ ಗಣಪನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಾರೆ. ಹೀಗೆ ಪ್ರತಿಷ್ಠಾಪಿಸುವಾಗ ಜನರು ಮೂರ್ತಿಯ ಬಗೆಗೆ ಎಚ್ಚರ ತಾಳಿದರೆ ಉತ್ತಮ. ವಿಗ್ರಹ ಕೊಳ್ಳುವವರು ಮುನ್ನೆಚ್ಚರಿಕೆ ವಹಿಸಿ, ಪರಿಸರ ಸ್ನೇಹಿ ಗಣಪತಿಯನ್ನೇ ಕೊಳ್ಳಬೇಕು.
ಇಂದಿನ ಕಾಲಘಟ್ಟದಲ್ಲಿಯೂ, ಸಾರ್ವಜನಿಕ ಗಣೇಶೋತ್ಸವದ ಉದ್ದೇಶ ಮೇಲ್ನೋಟಕ್ಕೆ ಅದೇ ಆಗಿದೆ. ಆದರೂ, ಹಬ್ಬದ ದಿನವೇ ಕ್ಷುಲಕ ಕಾರಣಗಳಿಗಾಗಿ ಜನರ ನಡುವೆ ಅಸಮಾಧಾನ ಸ್ಪೋಟಿಸುತ್ತಿವೆ. ಹಾಗಾಗದೆ, ಹಬ್ಬವು ಮನಮನಗಳನ್ನು ಬೆಸೆಯುವ ಸೇತುವೆಯಾಗಬೇಕು. ಮಾತ್ರವಲ್ಲದೆ, ಸಾರ್ವಜನಿಕ ಗಣೇಶೋತ್ಸವಗಳಿಗೆ ವಂತಿಗೆ ರೂಪದಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. ಹೀಗೆ ಕ್ರೋಢೀಕರಿಸಿದ ಹಣವು ದುರುದ್ದೇಶಗಳಿಗೆ ಅಥವಾ ವೈಯಕ್ತಿಕ ಸ್ವಾರ್ಥಕ್ಕಾಗಿ ಉಪಯೋಗಿಸದೆ ಸಮಾಜದ ಉನ್ನತಿಗೆ ಬಳಕೆಯಾಗಬೇಕು.
ವರುಷಗಳಲ್ಲಿ, ಸಾರ್ವಜನಿಕ ಗಣೇಶೋತ್ಸವಗಳ ವಿಗ್ರಹ ವಿಸರ್ಜನೆಯ ಸಂದರ್ಭದಲ್ಲಿ, ಆಧುನಿಕ ಸಿನಿಮಾ ಪದ್ಯಗಳಿಗೆ ಕುಣಿಯುತ್ತಾ, ಮೆರವಣಿಗೆ ಹೋಗುವ ವಿಚಿತ್ರ ಸನ್ನಿವೇಶಗಳು ಕಾಣುತ್ತಿವೆ. ಆದಿಯಿಂದ ಬಂದ ಸಂಸ್ಕ್ರತಿಯನ್ನು ಅನುಸರಿಸಬೇಕು. ಭಜನೆಯನ್ನು ಹಾಡುತ್ತಾ, ಭಜನೆಗೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಸಾಗುವುದನ್ನು ನೋಡುವುದೇ ಚಂದ. ಆಡಂಬರದ ಆಚರಣೆಗಳಿಗೆ ಮಾರುಹೋಗದೆ ನೈಜ ಭಕ್ತಿಯನ್ನು ಮರೆಯಬೇಕು. ಶ್ರದ್ಧಾಭಕ್ತಿಯಿಂದ ಗಣಪತಿಯನ್ನು ಆರಾಧಿಸಬೇಕು. ಎಷ್ಟೇ ಹೊಸ ಸಂಪ್ರದಾಯಗಳು ಎದುರಿಗಿದ್ದರೂ, ಮೂಲವನ್ನು ಮರೆಯದೆ ನಡೆದರೆ ಹಬ್ಬವನ್ನು ಆಚರಿಸಿದ ಶಾಂತಿ ನಮ್ಮೊಳಗೆ ನೆಲೆಸುತ್ತದೆ!