ನುಡಿನಮನ
newsics.com
ಎಲ್ಲರ ಬಗ್ಗೆಯೂ ಪ್ರೀತಿ, ಅಭಿಮಾನ ತೋರುತ್ತಿದ್ದ, ಹಮ್ಮು ಬಿಮ್ಮಿಲ್ಲದೆ ಎಲ್ಲರೊಳಗೊಂದಾಗುತ್ತಿದ್ದ ನಟಿ, ನಿರೂಪಕಿ, ಧ್ವನಿ ದಾನ ಕಲಾವಿದೆ, ಬರಹಗಾರ್ತಿ ಅಪರ್ಣಾ ವಸ್ತಾರೆ ಇನ್ನು ನೆನಪು ಮಾತ್ರ.
ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿ ಮೂಲದವರಾದ ಅಪರ್ಣಾ ರಾಜ್ಯಕ್ಕೇ ಚಿರಪರಿತರು. 1985ರಲ್ಲಿ ಮಸಣದ ಹೂವು ಚಿತ್ರದ ಮೂಲಕ ಅಪರ್ಣಾ ಸಿನಿ ರಂಗ ಪ್ರವೇಶ ಮಾಡಿದ್ದರು.
ಈ ಅಕ್ಟೋಬರ್ಗೆ 58ನೇ ವರ್ಷಕ್ಕೆ ಹೆಜ್ಜೆಯಿಡುವ ಮೊದಲೇ ಬೆಂಗಳೂರಿನ ಬನಶಂಕರಿ ನಿವಾಸದಲ್ಲಿ ಗುರುವಾರ (ಜುಲೈ 11) ಅಪರ್ಣಾ ಕೊನೆಯುಸಿರು ಚೆಲ್ಲಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಅವರ ಜೀವವನ್ನು ಬಿಡಲೇ ಇಲ್ಲ.
ಅಪರ್ಣಾ ಅವರ ಆಸೆ, ಕನಸೂ ಆಗಿದ್ದ ನಿರೂಪಣೆ ಕುರಿತ ಶಾಲೆ ತೆರೆಯುವ ಅವರ ಕನಸು ನನಸಾಗುವ ಮೊದಲೇ ಕ್ಯಾನ್ಸರ್ ಅವರ ಉಸಿರನ್ನು ಕಿತ್ತುಕೊಂಡಿದೆ.
ನಟಿಯಾಗಿ, ನಿರೂಪಕಿಯಾಗಿ, ಬರಹಗಾರ್ತಿಯಾಗಿ ಹಲವು ಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ಅಪರ್ಣ ನಿಧನ ಸುದ್ದಿ ಆಘಾತ ತಂದಿದೆ. ಮೆಟ್ರೋದಲ್ಲಿ ಪ್ರಯಾಣಿಕರ ಸುರಕ್ಷತೆ ಕುರಿತು ಕಾಳಜಿ ವಹಿಸಿದ್ದ ಅಪರ್ಣಾ ತಾವೇ ಇಹಲೋಕ ತ್ಯಜಿಸಿರುವುದು ಕನ್ನಡಿಗರಿಗೆ ನೋವು ತರಿಸಿದೆ.
ಮೆಟ್ರೋ ಹತ್ತುವಾಗ, ಇಳಿಯುವಾಗ ಅಂತರದ ಬಗ್ಗೆ ಗಮನವಿರಲಿ. ಮುಂದಿನ ನಿಲ್ದಾಣ…, ಬಾಗಿಲುಗಳು ಬಲಕ್ಕೆ ತೆರೆಯಲಿವೆ… ಹೀಗೆ ಮೆಟ್ರೋ ಪ್ರಯಾಣಿಕರ ಕಾಳಜಿ ವಹಿಸಿ, ಮುಂದಿನ ನಿಲ್ದಾಣ, ಮೆಟ್ರೋ ಬಾಗಿಲು, ಶುಚಿತ್ವ ಸೇರಿದಂತೆ ಪ್ರತಿಯೊಂದನ್ನೂ ಸ್ಪಷ್ಟ ಕನ್ನಡದ ಮೂಲಕವೇ ಹೇಳುತ್ತಿದ್ದ ಇಂಪಾದ ಧ್ವನಿಯ ನಿರೂಪಕಿ, ನಟಿ ಅಪರ್ಣ ಇಷ್ಟು ಬೇಗ ಸಾವಿನ ಮನೆಯ ಕದ ತಟ್ಟಬಾರದಿತ್ತು.
ಮೆಟ್ರೋ ಮಾತ್ರವಲ್ಲ, ಟಿವಿ ಕಾರ್ಯಕ್ರಮದಲ್ಲಿ ನಿರೂಪಣೆ, ಸರ್ಕಾರಿ ಕಾರ್ಯಕ್ರಮ, ಖಾಸಗಿ ಕಾರ್ಯಕ್ರಮಗಳ ನಿರೂಪಣೆ, ಆಕಾಶವಾಣಿಯಲ್ಲಿ ಹಲವು ಕಾರ್ಯಕ್ರಮ, ಚಂದನ ವಾಹಿನಿಯಲ್ಲಿ ನಿರೂಪಣೆ, ಹಿನ್ನೆಲೆ ಧ್ವನಿ ಸೇರಿದಂತೆ ಹಲವು ರೀತಿಯಲ್ಲಿ ಅಪರ್ಣಾ ಕನ್ನಡಗಿರ ಮನೆ ಮಾತಾಗಿದ್ದರು.
ಅಪರ್ಣ ಅಭಿನಯಿಸಿದ ಸಿನಿಮಾಗಳು
ಮಸಣದ ಹೂವು (1985)
ಸಂಗ್ರಾಮ (1987)
ನಮ್ಮೂರ ರಾಜ (1988)
ಸಾಹಸ ವೀರ (1988)
ಮಾತೃ ವಾತ್ಸಲ್ಯ (1988)…ರೋಹಿಣಿ
ಒಲವಿನ ಆಸರೆ (1989)
ಇನ್ಸ್ಪೆಕ್ಟರ್ ವಿಕ್ರಮ್ (1989)
ಒಂದಾಗಿ ಬಾಲು (1989)
ಡಾಕ್ಟರ್ ಕೃಷ್ಣ (1989)
ಒಂಟಿ ಸಲಗ (1989)
ಚಕ್ರವರ್ತಿ (1990)
ಗ್ರೇ ಗೇಮ್ಸ್ (2024)…ತಾರಾ
ಮೂಡಲಮನೆ, ಮುಕ್ತ ಸೇರಿದಂತೆ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಅಪರ್ಣ ನಟಿಸಿದ್ದಾರೆ.
ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದಾರೆ. 2013ರಲ್ಲಿ ಕನ್ನಡದಲ್ಲಿ ಮೊದಲ ಆವೃತ್ತಿ ಬಿಗ್ಬಾಸ್ ರಿಯಾಲಿಟಿ ಶೋ ಆರಂಭಗೊಂಡಿತ್ತು. ಮೊದಲ ಆವೃತ್ತಿಯಲ್ಲಿ ಅಪರ್ಣಾ ಸ್ಪರ್ಧಿಯಾಗಿ ಜನರ ಮನ ಗೆದ್ದಿದ್ದರು.
ಬಿಗ್ಬಾಸ್ ಬಳಿಕ 2015ರಲ್ಲಿ ಮಜಾ ಟಾಕೀಸ್ ಮೂಲಕ ಹಾಸ್ಯಪಾತ್ರದಲ್ಲಿ ಕಾಣಿಸಿಕೊಂಡರು. ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಹಾಸ್ಯ ಮನೋರಂಜನಾ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರದಲ್ಲಿ ಅಪರ್ಣಾ ಕಾಣಿಸಿಕೊಂಡಿದ್ದರು.