ನೆನಪು…
newsics.com
ಅಪರ್ಣಾ ಅಂದ್ರೇನೇ ಹಾಗೆ. ಅಪ್ಪಟ ಕನ್ನಡದಲ್ಲಿ ಪಟ ಪಟ ಮಾತು… ಇವರಿರುವ ಕಾರ್ಯಕ್ರಮದ ನಿರೂಪಣೆಯಲ್ಲಿ ಗೊಂದಲ ಇಣುಕುತ್ತಲೇ ಇರಲಿಲ್ಲ.
ಕಾರ್ಯಕ್ರಮಗಳ ನಿರೂಪಣೆ ಎಂದರೆ ಅಪರ್ಣಾ ಎನ್ನುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಮನೆ ಮಾತಾಗಿಬಿಟ್ಟಿದ್ದರು ಅಪರ್ಣಾ.
ತಮ್ಮ ಸ್ಪಷ್ಟ, ಶುದ್ಧ ಕನ್ನಡ ಭಾಷೆಯ ಅಮೋಘ ನಿರೂಪಣಾ ಶೈಲಿಯಿಂದ ಅಪಾರ ಜನಮನ್ನಣೆ ಗಳಿಸಿದ್ದರು.
ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರಾದ ಅಪರ್ಣಾ 1966ರ ಅಕ್ಟೋಬರ್ನಲ್ಲಿ ಜನಿಸಿದರು. ನಾರಾಯಣ ಸ್ವಾಮಿ-ಪದ್ಮಾವತಿ ದಂಪತಿಯ ಮಗಳಾದ ಅಪರ್ಣಾ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕುಮಾರಪಾರ್ಕ್ನಲ್ಲಿ ಪ್ರಾಥಮಿಕ ಮತ್ತು ಎಂಇಎಸ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪದವಿ ಶಿಕ್ಷಣ ಪಡೆದಿದ್ದರು.
ಅಪರ್ಣಾ ಅವರ ತಂದೆ ನಾರಾಯಣ ಸ್ವಾಮಿ ಕನ್ನಡಪ್ರಭ ಪತ್ರಿಕೆಯಲ್ಲಿ ಸಿನಿಮಾ ಪುರವಣಿ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾರಾಯಣ್ ಸ್ವಾಮಿ ಅವರಿಗೆ ಖ್ಯಾತ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪರಿಚಯವಿತ್ತು. ಈ ಹಿನ್ನೆಲೆಯಲ್ಲಿ ಕಣಗಾಲ್ ಅವರು ಅಪರ್ಣಾ ಪ್ರತಿಭೆ ಗುರುತಿಸಿ ಸಿನಿಮಾದಲ್ಲಿ ಅವಕಾಶ ನೀಡಿದ್ದರು. ಹೀಗೆ, 1984ರಲ್ಲಿ ‘ಮಸಣದ ಹೂವು’ ಚಿತ್ರದಿಂದ ತಮ್ಮ ಸಿನಿಮಾ ಪಯಣ ಆರಂಭಿಸಿದ ಅಪರ್ಣಾ ನಂತರದಲ್ಲಿ ‘ಇನ್ಸ್ಪೆಕ್ಟರ್ ವಿಕ್ರಂ’, ‘ನಮ್ಮೂರ ರಾಜ’, ‘ಸಾಹಸ ವೀರ’, ‘ಡಾಕ್ಟರ್ ಕೃಷ್ಟ’ ಸೇರಿದಂತೆ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದರು.
ಹಿರಿಯ ನಟರಾದ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ಟೈಗರ್ ಪ್ರಭಾಕರ್ ಹಾಗು ಶಿವ ರಾಜ್ಕುಮಾರ್ ಸೇರಿದಂತೆ ಹಲವು ನಟರೊಂದಿಗೆ ಬೆಳ್ಳಿತೆರೆಯಲ್ಲಿ ಮಿಂಚಿದರು. ಇವರ ನಟನೆಯ ಕೊನೆಯ ಚಿತ್ರ ‘ಗ್ರೇ ಗೇಮ್ಸ್’ ಆಗಿತ್ತು.
ಹೆಚ್ಚಿತು ಭಾಷೆಯ ಘಮ:
1993ರಿಂದ 2010ರವರೆಗೆ ರೇಡಿಯೋ ಆರ್ಜೆ (ರೇಡಿಯೋ ಜಾಕಿ) ಆಗಿಯೂ ಕಾರ್ಯ ನಿರ್ವಹಿಸಿದರು. 90ರ ದಶಕದಲ್ಲಿ ದೂರದರ್ಶನ, ಆಕಾಶವಾಣಿ ಕಾರ್ಯಕ್ರಮಗಳ ನಿರೂಪಣಾ ಶೈಲಿ ಅಪರ್ಣಾ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟವು. ಸರ್ಕಾರದ ಕಾರ್ಯಕ್ರಮಗಳು, ವಿವಿಧ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಅಪರ್ಣಾ ನಿರೂಪಣೆಯೇ ಇರುತ್ತಿತ್ತು.
ನಿರೂಪಣೆ ಎಂದರೆ ಕೇವಲ ಮಾತಲ್ಲ; ಕನ್ನಡದ ಕಂಪು, ಸಾಹಿತ್ಯ ಧಾರೆ ಎಂದು ಭಾಷಾ ಶ್ರೀಮಂತಿಕೆಯನ್ನು ತೋರಿಸಿಕೊಟ್ಟವರು ಅಪರ್ಣಾ. ಇದೇ ಕಾರಣಕ್ಕೆ ನಿರೂಪಣಾ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಕೀರ್ತಿ ಅವರದಾಯಿತು. 1988ರಲ್ಲಿ ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆ ಕಾಲ ನಿರೂಪಣೆ ನಿರ್ವಹಿಸಿದ ದಾಖಲೆಯೂ ಅಪರ್ಣಾ ಅವರದ್ದು.
ಮುಂದಿನ ನಿಲ್ದಾಣ…:
ಕಿರುತೆರೆಯ ‘ಮೂಡಲಮನೆ’, ‘ಮುಕ್ತ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಜನರಿಗೆ ಮತ್ತಷ್ಟು ಹತ್ತಿರವಾದರು. ಶುದ್ಧ ಕನ್ನಡ ಸಾಹಿತ್ಯದ ಗಾಂಭೀರ್ಯದೊಂದಿಗೆ ಹಾಸ್ಯವೂ ನಟಿಯಲ್ಲಿದೆ ಎಂಬುದು ಪರಿಚಯವಾಗಿದ್ದು, ಕಿರುತೆರೆಯ ಮಜಾ ಟಾಕೀಸ್ನಲ್ಲಿ. ಮೊದಲ ಬಾರಿಗೆ ಕಾಮಿಡಿ ಶೋನಲ್ಲಿ ಅಪರ್ಣಾರನ್ನು ಕಂಡ ಜನರು ಹುಬ್ಬೇರಿಸಿದ್ದುಂಟು. ಈ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಜನರ ಮನಸ್ಸು ಗೆದ್ದರು. ಆದರೆ ಈ ಕಾರ್ಯಕ್ರಮದಲ್ಲಿ ಟ್ರೋಲ್ ಆಗುತ್ತಿರುವುದನ್ನು ಗಮನಿಸಿದ ಅಪರ್ಣಾ ಅಲ್ಲಿಂದ ಹೊರಬರಲು ಮುಂದಾಗಿದ್ದರು. ಆದರೆ ಸೃಜನ್ ಲೋಕೇಶ್ ಮನವೊಲಿಸಿ ಉಳಿಸಿಕೊಂಡಿದ್ದರು.
ಈ ನಡುವೆ ಕನ್ನಡದ ಬಿಗ್ಬಾಸ್ ಮೊದಲ ಸೀಸನ್ನಲ್ಲೂ ಅಪರ್ಣಾ ಸ್ಪರ್ಧಿಯಾಗಿ ರಾಜ್ಯದ ಜನರ ಗಮನ ಸೆಳೆದಿದ್ದರು.
ಬೆಂಗಳೂರಿನ ‘ನಮ್ಮ ಮೆಟ್ರೋ’ಗೂ ಧ್ವನಿಯಾದರು. ಮುಂದಿನ ನಿಲ್ದಾಣ… ಎನ್ನುತ್ತ ಪ್ರಯಾಣಿಕರಿಗೆ ಮಾರ್ಗದರ್ಶಿಯಾದ ಅಪರ್ಣಾ ತಮ್ಮ ಜೀವನವನ್ನು ಅಪೂರ್ಣವಾಗಿಸಿ ಮರಳಿ ಬಾರದ ನಿಲ್ದಾಣಕ್ಕೆ ತೆರಳಿಬಿಟ್ಟಿದ್ದಾರೆ. ನಿರೂಪಣಾ ಶಾಲೆ ತೆರೆಯುವ ಕನಸನ್ನೂ ಹಾಗೆಯೇ ಬಿಟ್ಟು ಹೊರಟೇಬಿಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್ಗೆ ತುತ್ತಾದರು. ಛಲ ಬಿಡದೆ ಹೋರಾಡುತ್ತಲೇ ಇಹಲೋಕ ತ್ಯಜಿಸಿದರು. ಅಪರ್ಣಾ ನಟಿ, ನಿರೂಪಕಿ ಮಾತ್ರವೇ ಅಲ್ಲ, ಸೃಜನಶೀಲ ಮನಸ್ಸಿನ ಕನ್ನಡದ ಶ್ರೇಷ್ಠ ಕುಡಿ. ಇದ್ದಷ್ಟೂ ದಿನ ಕನ್ನಡ ತಾಯಿಯ ಸೇವೆ ಮಾಡಿದ ಹಿರಿಮೆ ಅಪರ್ಣಾ ಅವರದು.
ಎರಡು ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ಜತೆ ಹೋರಾಡಿದ್ದ ಅಪರ್ಣಾ ಧೀರೆ… ಪತಿ ನಾಗರಾಜ್ ವಸ್ತಾರೆ ಕಂಬನಿ