ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಹೊತ್ತು ಮೇಳಕ್ಕೆ ಸೇರಿ ಕೇವಲ 9 ವರ್ಷಗಳಲ್ಲಿ ಬಯಲಾಟದ ಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿರುವ ಕಲಾವಿದರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಶಿವಮೂರ್ತಿ ರಾವ್ ತಾರೇಕೊಡ್ಲು ಅವರ ಯಕ್ಷಪಯಣ ಕುತೂಹಲ ಹುಟ್ಟಿಸುತ್ತದೆ.
12 

♦ ದಿವ್ಯಾ ಶ್ರೀಧರ್ ರಾವ್
newsics.com@gmail.com
ಕ ನಸಿನಲ್ಲಿ ಬರುತ್ತಿದ್ದ ಯಕ್ಷಗಾನ ವೇಷವು ತನ್ನನ್ನು ಯಕ್ಷರಂಗದತ್ತ ಸೆಳೆದಿದ್ದೇ ತನ್ನ ಜೀವನದ ಒಂದು ಅದ್ಭುತವೆಂಬುದನ್ನು, ಅದ್ಭುತ ವ್ಯಕ್ತಿಯಾಗುವ ಮೂಲಕ ಸಾಬೀತುಪಡಿಸಿದ ಅಪ್ಪಟ ದೇಸಿ ಕಲಾವಿದ ಶಿವಮೂರ್ತಿ ರಾವ್ ತಾರೇಕೊಡ್ಲು.
ಪಿಯುಸಿ ಮುಗಿಸಿ, ಮುಂದೆ ಓದುವ ಆಸೆಯನ್ನು ಆರ್ಥಿಕ ಪರಿಸ್ಥಿತಿ ತಡೆದ ಪರಿಣಾಮ ದುಡಿಯುವ ಅನಿವಾರ್ಯತೆಗಾಗಿ ಕೂಲಿ ಕೆಲಸ ಆಯ್ಕೆ ಮಾಡಿಕೊಂಡು, ಕೂಲಿ ಮಾಡಿ ಸುಸ್ತಾಗಿ ಮಲಗಿದಾಗ ಕನಸಿನಲ್ಲಿ ಯಕ್ಷಗಾನ ವೇಷವೊಂದು ಬಂದು, ಅದರಿಂದ ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ಹೊತ್ತು ಮೇಳಕ್ಕೆ ಸೇರಿ ಕೇವಲ 9 ವರ್ಷಗಳಲ್ಲಿ ಬಯಲಾಟದ ಪ್ರತಿಭೆಗಳಲ್ಲಿ ಮುಂಚೂಣಿಯಲ್ಲಿರುವ ಕಲಾವಿದರ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಶಿವಮೂರ್ತಿಯವರ ಯಕ್ಷಪ್ರಯಾಣ ಕುತೂಹಲ ಹುಟ್ಟಿಸುತ್ತದೆ.
ಮೂಲತಃ ಉಡುಪಿ ಜಿಲ್ಲೆ ಕುಂದಾಪುರದವರಾದ ಶಿವಮೂರ್ತಿಯವರ ದೊಡ್ಡಣ್ಣ ಉದಯ್ ಕುಮಾರ್ ತಾರೇಕೊಡ್ಲು ಅವರೂ ಯಕ್ಷಕ್ಷೇತ್ರದಲ್ಲಿ ಮಾಡಿರುವ ಸಾಧನೆ ಇವರನ್ನು ಪ್ರೇರೇಪಿಸಿದೆ. ಹಾಗೆಯೇ ಆನಂದ್ ದೇವಾಡಿಗ ಕಮಲಶಿಲೆ ಹಾಗೂ ದಿ. ದಿನೇಶ್ ಮಡಿವಾಳ ಹೆನ್ನಾಬೈಲು ಅವರ ಶಿಷ್ಯನಾಗಿ ಬಾಲಗೋಪಾಲನಾಗಿ ಮೇಳಕ್ಕೆ ಸೇರಿದರು. ಗೆಜ್ಜೆ ಕಟ್ಟಿದ 4ನೇ ವರ್ಷದಲ್ಲೆ ಅಭಿಮನ್ಯುವಿನ ವೇಷ ಮಾಡಿ ಸೈ ಎನ್ನಿಸಿಕೊಂಡು ಗೌರವಕ್ಕೊಳಗಾದರು. ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ.
ಶ್ರದ್ದೆ ಹಾಗೂ ಭಕ್ತಿಯಿಂದ ಮಾಡುವ ವೇಷದ ಬಗ್ಗೆ ಪೂರ್ವ ತಯಾರಿ ಮಾಡಿಕೊಳ್ಳುವ ಶಿವಮೂರ್ತಿಯವರು, ಕುಣಿತ ಹಾಗೂ ಮಾತುಗಾರಿಕೆಯಲ್ಲಿ ಸೈ ಎನ್ನಿಸಿ, ತಾಳಮದ್ದಳೆ ಕ್ಷೇತ್ರಕ್ಕೂ ಕಾಲಿಟ್ಟು ಅಪಾರ ಪ್ರಮಾಣದ ಅಭಿಮಾನಿಗಳನ್ನು ಹೊಂದಿದ್ದಾರೆ.
ಕೃಷ್ಣ, ಕುಶ, ಬರ್ಬರಿಕ, ಅಭಿಮನ್ನುವಿನ ಇವರ ವೇಷಕ್ಕಾಗಿ ಅದೆಷ್ಟೋ ಬಾರಿ ಇವರಿಗಾಗಿಯೇ ಇಂತಹ ಪ್ರಸಂಗಗಳ ನಿರ್ಣಯವಾಗಿದ್ದು, ಅದಕ್ಕೆ ಕಾರಣ ಯಕ್ಷರಂಗದಲ್ಲಿ ತನ್ನ ಸ್ಪೂರ್ತಿಯಾಗಿರುವ ವಿಶ್ವ ಹೆನ್ನಾಬೈಲು, ಮಂಕಿ ಈಶ್ವರ್ ನಾಯ್ಕ, ಗಣೇಶ್ ಬಳೆಗಾರ್ ಹಾಗೂ ತನ್ನಣ್ಣ ಉದಯ್ ಕುಮಾರ್ ತಾರೆಕೊಡ್ಲು ಎಂಬುದನ್ನು ಹೇಳಲು ಮರೆಯದ ಈ ಸಣ್ಣ ವಯಸ್ಸಿನ ದೊಡ್ಡ ಪ್ರತಿಭೆ.