ಮೈಸೂರ್ ಪಾಕ್ ಇರಲಿ, ರೇಷ್ಮೆ ಇರಲಿ, ಅರಮನೆಯ ಸೌಂದರ್ಯ ಇರಲಿ, ಕಲೆ-ಸಂಸ್ಕೃತಿ ಸಂಗೀತ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮೈಸೂರು ಸದಾ ಮುಂದೆಯೇ ಇತ್ತು.
ಯದುವಂಶ ಅಂದರೆ ಒಡೆಯರ್ ವಂಶದ ದೊರೆಗಳು ಐದುನೂರಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿ ಮೈಸೂರನ್ನು ಸದಾ ಮುನ್ನಡೆಸಿದ್ದಾರೆ.
ಧ್ವನಿಬಿಂಬ 26
♦ ಬಿ.ಕೆ. ಸುಮತಿ
ಹಿರಿಯ ಉದ್ಘೋಷಕರು, ಆಕಾಶವಾಣಿ, ಬೆಂಗಳೂರು
newsics.com@gmail.com
ಜೂನ್ 21. ವಿಶ್ವ ಯೋಗ ದಿನ.
ಕಳೆದ 8 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಪ್ರಧಾನಮಂತ್ರಿಗಳು ಮೈಸೂರಿಗೆ ಭೇಟಿ ಇತ್ತಿದ್ದು ಈ ಬಾರಿಯ ವಿಶೇಷ .
ಮೈಸೂರಿನ ಬೀದಿಬೀದಿ, ಗಲ್ಲಿ ಗಲ್ಲಿಯೂ ಅಕ್ಷರಶಃ ಸಂಭ್ರಮಿಸಿತು.ಮೈಸೂರು ಅರಮನೆಯ ಮುಂದೆ 15 ಸಾವಿರಕ್ಕೂ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದರು. ಇದು ಮೈಸೂರಿಗೆ ಸಂದ ಯೋಗ ಎಂದೇ ಬಣ್ಣಿಸಲಾಯಿತು. ಪ್ರಧಾನ ಮಂತ್ರಿಗಳು ಮೈಸೂರು ಅರಮನೆಯಲ್ಲಿ ರಾಜ ಪರಿವಾರದವರನ್ನು ಭೇಟಿ ಮಾಡಿದರು. ಉಪಾಹಾರ ಸವಿದರು. ಉಪ್ಪಿಟ್ಟು, ಅವಲಕ್ಕಿ, ಇಡ್ಲಿ, ಸಾಂಬಾರ್, ರುಚಿ ನೋಡಿದರು.
ಮೈಸೂರ್ ಪಾಕ್ ರುಚಿಗೆ ಮರುಳಾದರು.
ಅಂದಹಾಗೆ ಈ ಮೈಸೂರುಪಾಕ್ ಜನಕ ಯಾರು ಗೊತ್ತೆ?
ಕಾಕಾಸುರ ಮಾದಪ್ಪ ಎಂಬ ಬಾಣಸಿಗ.
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜೇಂದ್ರ ಒಡೆಯರ್ ಅವರ ಆಡಳಿತ ಅವಧಿಯಲ್ಲಿ ಮಾದಪ್ಪ ಅವರು ಅರಮನೆಯ ಪ್ರಮುಖ
ಬಾಣಸಿಗರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಆಗ ಮೈಸೂರು ಅರಮನೆಯಲ್ಲಿ
ಯುರೋಪಿಯನ್ ಅಡುಗೆಗಳು ಕೂಡ ಸಿದ್ಧವಾಗುತ್ತಿತ್ತು.
ಒಮ್ಮೆ ಮಹಾರಾಜರು “ಯಾವುದಾದರೂ ಹೊಸ ತಿಂಡಿ ಮಾಡು” ಎಂದು ಬಯಕೆ ಹೇಳಿದಾಗ, ಮಾದಪ್ಪ ಅವರು ಕಡ್ಲೆ ಹಿಟ್ಟು, ತುಪ್ಪ, ಸಕ್ಕರೆ ಬಳಸಿ ಮಾಡಿದ ವಿಶೇಷ ಪ್ರಯೋಗವೇ ನಂತರ “ಮೈಸೂರು ಪಾಕ್” ಆಯಿತು.
ಹೊಸ ತಿಂಡಿಯ ಸ್ವಾದವನ್ನು ಸವಿದ ಮಹಾರಾಜರು ಇದಕ್ಕೆ ಏನಾದರೂ ಹೆಸರಿಡಬೇಕು ಎಂದು ಯೋಚಿಸುತ್ತಾ ತಾವೇ ಸ್ವತಃ “ಮೈಸೂರು ಪಾಕ್” ಎಂದು ನಾಮಕರಣ ಮಾಡಿದರು.
ಇಂದಿಗೂ ಮಾದಪ್ಪ ಅವರ ವಂಶಜರು ಮೈಸೂರಿನಲ್ಲಿ ಮೈಸೂರು ಪಾಕ್ ಉದ್ಯಮದಲ್ಲಿ ತೊಡಗಿದ್ದಾರೆ
ಮೈಸೂರು ರೇಷ್ಮೆ ಕಥೆ ಕೂಡ ಹೀಗೆ.
ಮೈಸೂರು ರೇಷ್ಮೆಯ ಹಿಂದೆ ಮಹಾರಾಜರ ದೂರದೃಷ್ಟಿ ಇದೆ.
ರಾಣಿ ವಿಕ್ಟೋರಿಯಾ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವಕ್ಕೆ ನಾಲ್ವಡಿ ಕೃಷ್ಣರಾಜರು ಲಂಡನ್ಗೆ ಭೇಟಿ ನೀಡಿದ್ದರು. ಆಗ ಅಲ್ಲಿ ರಾಜಮನೆತನದವರು ಧರಿಸಿದ್ದ ಯಂತ್ರನಿರ್ಮಿತ ರೇಷ್ಮೆ ಅವರ ಗಮನ ಸೆಳೆಯಿತು. ಕೂಲಂಕಷವಾಗಿ ಅಧ್ಯಯನ ಮಾಡಿದ ಅರಸರು, ಮೈಸೂರಿನಲ್ಲಿ ಇದನ್ನು ನಾವೇ ತಯಾರಿಸಬೇಕು ಎಂದು ಯೋಚಿಸಿದರು. ಆಗ ಕೈ ಮಗ್ಗ ಬಳಸುತ್ತಿದ್ದರು. ಮಹಾರಾಜರು 23 ವಿದ್ಯುತ್ ಮಗ್ಗಗಳನ್ನು ಸ್ವಿಟ್ಝರ್ಲಂಡ್ ಇಂದ ಮೈಸೂರಿಗೆ ತರಿಸಿದರು. ರೇಷ್ಮೆ ತಯಾರಿಕೆಗೆ ಒಂದು ಹೊಸ ಸ್ವರೂಪ ಕೊಟ್ಟರು. ರೇಷ್ಮೆ ತಯಾರಿಕೆ ಉದ್ಯಮವಾಗಿಯೇ ಬೆಳೆಯಿತು. ಇಂದು ಮೈಸೂರು ರೇಷ್ಮೆ ವಿಶ್ವ ಪ್ರಸಿದ್ಧವಾಗಿದೆ.
ಸಿಹಿತಿಂಡಿ ಇರಲಿ, ರೇಷ್ಮೆ ಇರಲಿ, ಅರಮನೆಯ ಸೌಂದರ್ಯ ಇರಲಿ, ಕಲೆ-ಸಂಸ್ಕೃತಿ ಸಂಗೀತ ಸಾಮಾಜಿಕ ಆರ್ಥಿಕ ರಾಜಕೀಯ ಶೈಕ್ಷಣಿಕ ಎಲ್ಲಾ ಕ್ಷೇತ್ರಗಳಲ್ಲಿಯೂ ಮೈಸೂರು ಸದಾ ಮುಂದೆಯೇ ಇತ್ತು.
ಯದುವಂಶ ಅಂದರೆ ಒಡೆಯರ್ ವಂಶದ ದೊರೆಗಳು ಐದುನೂರಕ್ಕೂ ಹೆಚ್ಚು ವರ್ಷಗಳ ಕಾಲ ಆಡಳಿತ ನಡೆಸಿ ಮೈಸೂರನ್ನು ಸದಾ ಮುನ್ನಡೆಸಿದ್ದಾರೆ.
“ಕೃಷ್ಣರಾಜ ಭೂಪ…..
ಮನೆ ಮನೆಗೆಲ್ಲ ದೀಪ..
ಪ್ರದೀಪ..”
ಎಂಬ ಜನಜನಿತ ಹಾಡಿದೆ. ವಿದ್ಯುತ್ ದೀಪಗಳನ್ನು ತಂದು ಮನೆ ಮನೆಗೆ ಬೆಳಕು ನೀಡಿದರು.
ಮೈಸೂರು ಮಹಾರಾಜ ಕಾಲೇಜು ಬೆಂಗಳೂರು ಸೆಂಟ್ರಲ್ ಕಾಲೇಜು ಇವುಗಳನ್ನು ಸ್ಥಾಪನೆ ಮಾಡಿ ಅಕ್ಷರ ಪ್ರಸಾರ ಮಾಡಿದರು ಮೈಸೂರು ಅರಸರು.
ಕನ್ನಡವನ್ನು ಕಟ್ಟಿದರು.
ರೈಲು ಮಾರ್ಗಗಳನ್ನು ಸ್ಥಾಪಿಸಿದರು.
ಪೇಪರ್, ಉಕ್ಕು, ಕಾರ್ಖಾನೆಗಳನ್ನು ಸ್ಥಾಪನೆ ಮಾಡಿದರು.
ಮೈಸೂರು ಅರಸರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳು ಎಂದು ಯಾವ ಕಾಲದಲ್ಲಿಯೂ ಒಂದು ನಿರುಮ್ಮಳ ಭಾವವನ್ನೇ ಅನುಭವಿಸಿವೆ.
ಇಂಥ ಮೈಸೂರು ಅರಸರ ಭವ್ಯಪರಂಪರೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಗತಿಸಿದ ನಂತರ ಮುಕ್ತಾಯವಾದ ಹಾಗೆ ಭಾಸವಾಯಿತು.
ಅವರೊಂದಿಗೆ ಒಂದು ಇತಿಹಾಸ ಪರಂಪರೆ ಮುಕ್ತಾಯವಾದಂತೆ ಆಯಿತು.
ಇದೆಲ್ಲ ಸರಿ, ಈಗ ಯಾಕೆ ಈ ಮಾತು ಎನ್ನುವಿರಾ?
ಪ್ರಧಾನಿಗಳು ಮೈಸೂರಿಗೆ ಭೇಟಿ ಕೊಟ್ಟ ಮೇಲೆ ಮೈಸೂರಿನ ಘನತೆ ಹೆಚ್ಚಾಯಿತು ಎಂಬಂತೆ ಕೆಲವರು ಬಿಂಬಿಸಿದಾಗ ಪಿಚ್ಚೆನಿಸಿತು.
ಅರಮನೆಯ websiteಗೆ ತಿಂಗಳಿಗೆ ಆರರಿಂದ ಏಳು ಸಾವಿರ ಮಂದಿ ಭೇಟಿ ನೀಡುತ್ತಿದ್ದರು, ದಿನಾಂಕ 21 ಮತ್ತು 22 ಎರಡೇ ದಿನಗಳಲ್ಲಿ 6400 ಮಂದಿ ಭೇಟಿ ನೀಡಿದ್ದಾರೆ,
ಅರಮನೆಯ ಸೌಂದರ್ಯಕ್ಕೆ ವಿದೇಶೀಯರು 5 star ನೀಡಿದ್ದಾರೆ ಎಂಬ ವರದಿಗಳು, ವಿವರಣೆ, ಸಂಭ್ರಮ ಸಂತೋಷ ನೋಡಿದಾಗ, ಈಗಷ್ಟೇ ಮೈಸೂರು ಎಲ್ಲರ ಗಮನ ಸೆಳೆಯಿತು. ಯಾರಿಗೂ ಮೈಸೂರು ಗೊತ್ತೇ ಇರಲಿಲ್ಲ ಅನ್ನುವ ಹಾಗೆ ಇದೆ.
ಪ್ರಧಾನಿಗಳ ಭೇಟಿಯಿಂದ ಮೈಸೂರು ಪಾವನವಾಯಿತೋ?
ಅಥವಾ ಸಾಂಸ್ಕೃತಿಕ ಐತಿಹಾಸಿಕ ನಗರ ಮೈಸೂರು ಮತ್ತೊಮ್ಮೆ ವೈಭವ ಕಂಡಿತೋ?
ವರದಿಗಳಿಗೆ ಬೇರೆಯೇ ಆಯಾಮ ಬರಬಹುದಿತ್ತು.
ಮೈಸೂರು ಅಂದೂ ಇಂದೂ ಎಂದೂ
ಚೈತನ್ಯ ನಗರ. ಉಜ್ವಲ, ಚಿನ್ಮಯಿ. ಸತ್ಪರಂಪರೆಯ ನಾಡು.