ಕೊಕ್ಕರೆಬೆಳ್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಮಂಡ್ಯ ಜಿಲ್ಲೆಯ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ ಹದಿಮೂರು ಕಿಲೋಮೀಟರ್ ದೂರ ಹಾರಿ ಬರುತ್ತವೆ.
ಪಕ್ಷಿ ಸಂರಕ್ಷಣೆ 55
♦ ಕಲ್ಗುಂಡಿ ನವೀನ್
ಅಂಕಣಕಾರರು, ವನ್ಯಜೀವಿ ತಜ್ಞರು
ಚಿತ್ರ: ಜಿ.ಎಸ್. ಶ್ರೀನಾಥ್
ksn.bird@gmail.com
newsics.com@gmail.com
ಇದುವರೆಗೂ ನಾವು ಸಂರಕ್ಷಣೆಯ ವಿವಿಧ ಆಯಾಮಗಳನ್ನು ನೋಡುತ್ತಾ ಬಂದೆವು. ಸಾಂದರ್ಭಿಕವಾದ ವಿಷಯಗಳನ್ನು ಸಂರಕ್ಷಣೆಯ ದೃಷ್ಟಿಯಿಂದ ನೋಡುತ್ತಾ ಬಂದೆವು. ಉದಾಹರಣೆಗೆ ಬಜೆಟ್, ಚುನಾವಣೆ ಇತ್ಯಾದಿ. ಇದೀಗ ಮುಗಿದ ಚುನಾವಣೆಯನ್ನು ಗಮನಿಸಿದರೆ ಪರಿಸರ ಕುರಿತಾಗಿ ಅಲ್ಲೇನಾದರೂ ಕಂಡಿತೇ? ಬಹುಶಃ ಒಂದೇ ಬದಲಾವಣೆ ಎಂದರೆ ಕೆಲವು ಹುರಿಯಾಳುಗಳ ಪ್ರಚಾರದಲ್ಲಿ ನಾವು ಕೆರೆಗಳನ್ನು ಅಭಿವೃದ್ಧಿ ಮಾಡಿದ್ದೇವೆ ಎಂಬ ಅಂಶವಿತ್ತು. ಇದು ಮುಂದಿನ ದಿನಗಳಲ್ಲಿ ಬೆಳೆದು ಪರಿಸರವೇ ಪ್ರಮುಖ ಆದ್ಯತೆಯಾಗಲಿ ಎಂದು ಹಾರೈಸೋಣ.
ಇಲ್ಲಿ ನಾವು ಗಮನಿಸಬೇಕಾಗಿರುವುದು ಕೆರೆಗಳ ಅಭಿವೃದ್ಧಿಯನ್ನು ಚುನಾವಣಾ ಪ್ರಚಾರದಲ್ಲಿ ಹೇಳಿಕೊಂಡರೆ ಮತ ಸಿಗುತ್ತದೆ ಎಂಬ ಭಾವ ರಾಜಕಾರಣಿಗಳಲ್ಲಿ ಬಂತಲ್ಲ? ಇದೊಂದು ಮಹತ್ವದ ಅಂಶ ಎಂದೇ ನನ್ನ ಅಭಿಪ್ರಾಯ. ಇದು ಹೆಚ್ಚಾಗಬೇಕು. ನಾವೆಲ್ಲರೂ ಈ ನಿಟ್ಟಿನಲ್ಲಿ ಯೋಚಿಸೋಣ.
ಈ ಬಾರಿ ಸಂರಕ್ಷಣೆಯಲ್ಲಿ ಒಂದು ವಿಶಿಷ್ಟವಾದ ಕೆರೆಯನ್ನು ಪರಿಚಯ ಮಾಡಿಕೊಳ್ಳೋಣ. ಅದೇ ಮಂಡ್ಯ ಜಿಲ್ಲೆಯಲ್ಲಿರುವ ಸೂಳೆಕೆರೆ. ಈ ಹೆಸರಿನ ಕೆರೆಗಳು ನಮ್ಮಲ್ಲಿ ಇನ್ನು ಕೆಲವಿವೆ. ಇದೊಂದು ಸಾಮಾಜಿಕ ಆಯಾಮವಿರುವ ವಿಷಯ. ಲೈಂಗಿಕ ಕಾರ್ಯಕರ್ತರು ಸಮಾಜದ ಒಳಿತಿಗಾಗಿ ಕೆರೆಕಟ್ಟೆಗಳನ್ನು ಕಟ್ಟಿಸುತ್ತಿದ್ದರು ಎಂಬುದು ಎಷ್ಟೋ ಮಹತ್ವದ ವಿಷಯವಲ್ಲವೆ!
ಇರಲಿ, ಇದು ನಮಗೆ ಒಂದು ಜಾಗತಿಕ ಮಹತ್ವದ ಪಕ್ಷಿತಾಣವಾಗಿ ಮುಖ್ಯ. ಇಲ್ಲಿ ಹೆಜ್ಜಾರ್ಲೆ (Pelican), ಬಿಳಿಹುಬ್ಬಿನ ಬಾತು (Gargeny), ಹಿನ್ನೀರಗೊರವ (Black tailed Godwit), ಚಲುಕಬಾತು (Northern Shoveller) ಇನ್ನು ಅನೇಕ ಹಕ್ಕಿಗಳಿಗೆ ಈ ಕೆರೆ ಆಶ್ರಯತಾಣ. ಕೃಷ್ಣರಾಜಸಾಗರದ ಒಂದು ಕಾಲುವೆ ಇದಕ್ಕೆ ನೀರುಣಿಸುತ್ತದೆಯಾಗಿ ಇದು ವರ್ಷವಿಡೀ ತುಂಬಿ ತುಳುಕುತ್ತಿರುತ್ತದೆ. ಇಲ್ಲಿ ಮೀನುಗಾರಿಕೆಯೂ ನಡೆಯುತ್ತದೆ.
ಇದಕ್ಕೆ ಇನ್ನೊಂದು ವಿಶೇಷತೆಯಿದೆ. ಅದೇ ಕೊಕ್ಕರೆಬೆಳ್ಳೂರಿಗೆ ಬರುವ ಹೆಜ್ಜಾರ್ಲೆಗಳಿಗೆ ಆಹಾರ ಒದಗಿಸುವ ಬಹುದೊಡ್ಡ ಮೂಲ ಈ ಸೂಳೆಕೆರೆ. ಇದು ಕೊಕ್ಕರೆಬೆಳ್ಳೂರಿನಿಂದ ಹದಿಮೂರು ಕಿಲೋಮೀಟರ್ ದೂರದಲ್ಲಿದೆ. ಮಂಡ್ಯದ ಕನಳಿ ಹಳ್ಳಿ ಈ ಕೆರೆಯ ತಾಣ. ಆಹಾರಕ್ಕಾಗಿ ಹದಿಮೂರು ಕಿಲೋಮೀಟರ್ ದೂರ ಹಾರಿಬರುತ್ತವೆ ಎಂಬುದನ್ನು ನಾವೆಲ್ಲರೂ ಯೋಚಿಸಬೇಕು. ಅಂತೆಯೇ, ತಂದೆ ತಾಯಿ ಹಕ್ಕಿಗಳು ಹೀಗೆ ಬರುವಾಗ ಗೂಡಿನಲ್ಲಿರುವ ಮರಿಗಳಿಗೆ ರಕ್ಷಣೆ ಬೇಕಾಗುತ್ತದೆ, ಅದನ್ನು ಗ್ರಾಮಸ್ಥರು ಪ್ರೀತಿಯಿಂದ ಹೆರಿಗೆಗೆ ಬಂದು ಮಗಳು ಎಂಬಂತೆ ಒದಗಿಸುತ್ತಾರೆ ಎಂಬುದು ಎಂತಹ ಮಧುರವಾದ ವಿಷಯವಲ್ಲವೆ?