Sunday, October 1, 2023

ಸಂತೋಷವೆಂಬುದು ಬಗೆ ಬಗೆ

Follow Us

  • ಸ್ಮಿತಾ ಅಮೃತರಾಜ್, ಸಂಪಾಜೆ
    response@134.209.153.225

ಕೆಲಸ ಎಲ್ಲಾ ಬೇಗ ಮುಗಿಯಿತು ಈಗ ಹೊತ್ತೇ ಹೋಗುತ್ತಿಲ್ಲ ಅಂತಾನೋ ಅಥವಾ ನಂಗೆ ಮಾಡೋಕೆ ಬೇರೇನೂ ಕೆಲಸವಿಲ್ಲದೆ ಸಿಕ್ಕಾಪಟ್ಟೆ ಬೋರ್ ಆಗಿ ಏನು ಮಾಡಬೇಕೆಂದು ಗೊತ್ತಾಗದೆ ಒಂದಷ್ಟು ಹೊತ್ತು ನಿದ್ದೆ ತೆಗೆದೆ, ಧಾರಾವಾಹಿ ನೋಡಿದೆ, ಯಾವುದೋ ಸಿನೇಮಾ ಬರುತ್ತಿತ್ತು ಅಷ್ಟೇನೂ ಒಳ್ಳೆಯದಲ್ಲದಿದ್ದರೂ ಕುಳಿತು ನೋಡಿದೆ ಆದರೂ ಉದ್ದಕ್ಕೆ ಮುಗಿಯದಷ್ಟು ಬಿದ್ದುಕೊಂಡಿರುವ ಹಗಲು ಕಾಣುವಾಗ ಸಿಕ್ಕಾಪಟ್ಟೆ ಕಿರಿಕಿರಿ ಆಗುತ್ತದೆ ಅಂತ ಅವರಿವರು ಹೇಳುವಾಗ ನಿಜಕ್ಕೂ ಅಸೂಯೆಯಾಗುತ್ತದೆ. ಮತ್ತೊಂದು ವರ್ಗದವರಿದ್ದಾರೆ, ಅವರಿಗೆ ಹೊತ್ತೇ ಸಾಕಾಗುವುದಿಲ್ಲವಂತೆ. ಬೆಳಗ್ಗೆ ಎದ್ದದ್ದೇ ತಡ, ಲಗುಬಗೆಯಲ್ಲಿ ತಿಂಡಿ ತಯಾರಿಸಬೇಕು, ಗಂಡ ಮಕ್ಕಳನ್ನು ಸುಧಾರಿಸಬೇಕು, ಜತೆಗೆ ದುಡಿಯುವ ಹೆಣ್ಣುಮಗಳಾದರೆ ಎಲ್ಲವನ್ನೂ ನಿಭಾಯಿಸಿಕೊಳ್ಳಬೇಕು. ಇಷ್ಟೆಲ್ಲದರ ನಡುವೆ ರಾತ್ರೆ ಊಟ ಆಗುವುದೊಂದೇ ಗೊತ್ತು ಅದು ಯಾವ ಮಾಯಕದಲ್ಲಿಯೋ ತೂಕಡಿಕೆ ಬಂದು ಹಾಸಿಗೆ ಕಂಡರೆ ಸಾಕೆನ್ನಿಸುವಷ್ಟು ಸುಸ್ತಾಗಿ ಬಿಡುತ್ತದೆ ಅಂತ ಮನೆಯಲ್ಲಿಯೇ ಗೃಹ ಕೃತ್ಯದಲ್ಲಿ ತೊಡಗಿಸಿಕೊಂಡ ಮಹಿಳೆಯರನ್ನು ಮೆಚ್ಚುಗೆಯಿಂದ ನೋಡುತ್ತಾ, ನೀವು ಬಿಡಿ, ಪುಣ್ಯವಂತರು ಕಣ್ರೀ ಅಂತ ಅವರ ಅದೃಷ್ಟಕ್ಕಾಗಿ ಕರುಬುತ್ತಾರೆ. ಆದರೆ ನಮ್ಮ ಗೃಹಿಣಿಯರ ಕಡೆ ಬಂದರೆ ಅವರೋ ಕಿವಿ ತೂತಾಗುವಷ್ಟು ನೂರಾರು ಕತೆ ಕಟ್ಟುತ್ತಾರೆ. ನಮಗೆ ದಿನವಿಡೀ ಆಚೆಯಿಂದ ಈಚೆಗೆ ಹೆಣಗಾಡೋದು ಒಂದೇ ಕೆಲಸ. ಇತ್ತ ಕೆಲಸವೂ ಮುಗಿಯುವುದಿಲ್ಲ, ಅತ್ತ ಮಾಡಿದ ಕೆಲಸವೂ ಕಾಣುವುದಿಲ್ಲ. ನಮ್ಮ ಪಾಡು ಯಾರಿಗೂ ಬರಬಾರದು ಅಂತ ಅವರ ಅಳಲು. ಇನ್ನು ಕೃಷಿಕ ಮಹಿಳೆಯರ ಸಂಕಟ ಬೇರೆಯೇ ತೆರನದ್ದು. ಅವರಿಗೆ ಗೃಹ ಕೃತ್ಯ ಸಂಭಾಳಿಸಿಕೊಳ್ಳುತ್ತಲೇ ಕೃಷಿ ಕೆಲಸದಲ್ಲಿ ತೊಡಗಿಸಿ ಕೊಳ್ಳುವ ಅನಿವಾರ್ಯತೆ ಇದೆ. ಹಾಗಾಗಿ ನಮ್ಮದು ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ. ಜೀವನದಲ್ಲಿ ಒಂದು ಸಿನೇಮಾ ಇಲ್ಲ, ಪ್ರವಾಸ ಇಲ್ಲ, ಇದೆಂಥಾ ಬದುಕು ಅಂತ ಒಳಗೊಳಗೆ ಹಲುಬಿಕೊಂಡರೂ ಹೊರಗೆ ಹೋಗುವ ಅವಕಾಶ ಸಿಕ್ಕರೂ ನೂರೆಂಟು ಸಬೂಬು ಹೇಳಿಕೊಂಡು ಅದರಿಂದ ನುಣುಚಿಕೊಳ್ಳಲು ಯತ್ನಿಸುವುದು ಕೂಡ ಅಷ್ಟೇ ಸತ್ಯ. ಎಲ್ಲಾ ಒತ್ತಡಗಳ ನಡುವೆ ಎಲ್ಲರೂ ಬಿಡುಗಡೆಯನ್ನು ಬಯಸುವವರೇ. ಬಹುಷ; ಇಂತಹ ಒತ್ತಡಗಳಿದ್ದರೆ ಸಮಯ ಎಷ್ಟು ಅಮೂಲ್ಯ ಮತ್ತು ಅದರಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಉಮೆದಿಗೆ ಮನಸು ಬೀಳುವುದು. ನನ್ನ ಗೆಳತಿಯೊಬ್ಬಳು ವೃತ್ತಿಯಲ್ಲಿ ಅಧಿಕಾರಿಯಾದರೂ ಅವಳ ಪ್ರವೃತ್ತಿಗಳು ಹತ್ತು ಹಲವು. ಇದಕ್ಕೆಲ್ಲಾ ಎಲ್ಲಿಯಾ ಪುರುಸೊತ್ತು ಅಂತ ಕಣ್ಣರಳಿಸಿದರೆ, ಊಟಕ್ಕೂ, ನಿದ್ದೆಗೂ ಸಮಯ ಸಾಲುತ್ತೆ ಅಂತಾದರೆ ನಮ್ಮ ಆಸಕ್ತಿಗೆ ಸಮಯ ಸಿಕ್ಕೇ ಸಿಗುತ್ತೆ ಅನ್ನುವುದು ಆಕೆಯ ಅಂಬೋಣ.

ನನ್ನಜ್ಜಿಯ ಕಾಲಕ್ಕೆ ಕೆಲಸ ಸರಳೀಕರಣಗೊಳಿಸುವಂತಹ ಯಾವ ಯಂತ್ರೋಪಕರಣಗಳೂ ಬಂದಿರಲಿಲ್ಲ. ದೈಹಿಕ ಶ್ರಮವನ್ನಷ್ಟೇ ನೆಚ್ಚಿಕೊಂಡು ಕೆಲಸ ಪೂರೈಸ ಬೇಕಾದ ಅನಿವಾರ್ಯತೆಯಲ್ಲೂ ಯಾವುದೇ ಲೋಪವಾಗದೆ ಆಯಾಯ ಕಾಲಕ್ಕೆ ಮಾಡಬೇಕಾದ ಕೆಲಸಗಳು ಮುಗಿದೇ ತೀರುತ್ತಿದ್ದವು. ಅವೆಲ್ಲದರ ನಡುವೆಯೂ ಅವರೆಲ್ಲರೂ ಬುಟ್ಟಿ ಹೆಣೆಯುತ್ತಿದ್ದರು, ಚಾಪೆ ನೇಯುತ್ತಿದ್ದರು,ಕಸೂತಿ ಕಾಕುತ್ತಾ ಸೋಬಾನೆ ಪದ ಹಾಡುತ್ತಿದ್ದರು, ಅವರ ಕಥಾ ಕಣಜಕ್ಕೆ ಕೈ ಹಾಕಿದರೆ ಅಬ್ಭಾ! ಮೈ ನವಿರೇಳಿಸುವಷ್ಟು. ಅಚ್ಚರಿಯಾಗುತ್ತದೆ. ಬಹುಷ; ಆಸಕ್ತಿ ಮತ್ತು ನಮ್ಮನ್ನು ನಾವು ಸಂತೋಷವಾಗಿಟ್ಟುಕೊಳ್ಳಬೇಕೆಂಬ ತುಡಿತ ಇದ್ದರೆ ಖಂಡಿತಾ ಮನಸು ಇವಕ್ಕೆಲ್ಲಾ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತದೆಯೋ ಏನೋ?. ಕೆಲಸ ನಡುವೆಯೇ ಸಾಗುವ ಇಂತಹ ಚಟುವಟಿಕೆಗಳೆ ಅವರ ಆಯಾಸವನ್ನು ಪರಿಹರಿಸುವ ಸಾಧನಗಳು ಕೂಡ.
ಹೆಚ್ಚಿನವರಿಗೆ ಇಂತಹ ಸೃಜನಶೀಲ ಚಟುವಟಿಕೆಗಳೇ ಬಿಡುಗಡೆಯ ಮಾಧ್ಯಮ ಮತ್ತು ಆಯಾಸ ಪರಿಹರಿಸಿಕೊಳ್ಳುವ ಸಾಧನ. ಸಿನೇಮಾ, ಧಾರಾವಾಹಿ ನಮಗೆ ಕ್ಷಣಿಕ ಮನರಂಜನೆಯನ್ನಷ್ಟೆ ಒದಗಿಸಬಲ್ಲವೇ ಹೊರತು ನಮ್ಮನ್ನು ಒಳಗಿನಿಂದ ಸಂತೋಷವಾಗಿಡಲು ಸಾಧ್ಯವಾಗಲಾರದು. ಆದರೆ ದಿನದ ಬಹುಪಾಲು ಶಾಪಿಂಗ್, ತಿರುಗಾಟ ಅಂತ ಕಾಲ ಕಳೆಯುವ ನನ್ನ ಗೆಳತಿಯೊಬ್ಬಳು, ಸಾಧ್ಯವಾದಷ್ಟು ಮನೆಯಲ್ಲಿಯೇ ಇರುವ ಮತ್ತು ಬಿಡುವು ಸಿಕ್ಕಾಗಲೆಲ್ಲಾ ಹಸುಗೂಸಿನಂತೆ ನನ್ನ ಒತ್ತಿನಲ್ಲೇ ಇರುವ ಪುಸ್ತಕಗಳನ್ನ ನೋಡಿ ಆಕೆ ಯಾವಾಗಲು ಹೇಳೋದಿದೆ- “ನಿನ್ನನ್ನು ನೋಡಿದರೆ ನನಗೆ ಅಯ್ಯೋ ಅನ್ನಿಸುತ್ತೆ. ಜೀವನದಲ್ಲಿ ಸಂತೋಷವಾಗಿರುವುದು ಹೇಗೆಂದು ನಿನಗೆ ಗೊತ್ತೇ ಇಲ್ಲವೇ?”. ಅವಳ ಕಣ್ಣನ್ನೇ ನೋಡುತ್ತೇನೆ. ಕೆಲವು ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಹಳ್ಳಕ್ಕೆ ಉರುಳಿದ ಬಸ್: 8‌ ಮಂದಿ‌ ಸಾವು, 25 ಪ್ರಯಾಣಿಕರಿಗೆ ಗಾಯ

newsics.com ಚೆನ್ನೈ: ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಶನಿವಾರ ಪ್ರವಾಸಿ ಬಸ್ ಹಳ್ಳಕ್ಕೆ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು...

ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಸಾಧ್ಯತೆ!

newsics.com ನವದೆಹಲಿ: ದೇಶದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ಕನಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ. ತಮಿಳುನಾಡು, ಕರಾವಳಿ...

ಕರ್ನಾಟಕದಲ್ಲಿ ಈ ಬಾರಿ ಶೇ. 25ರಷ್ಟು ಮಳೆಯ ಕೊರತೆ

newsics.com ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ಅವಧಿಯಲ್ಲಿ ಈ ವರ್ಷ ಶೇ 25ರಷ್ಟು ಮಳೆ ಕೊರತೆಯಾಗಿದೆ. ಜೂನ್‌ 1ರಿಂದ ಸೆಪ್ಟೆಂಬರ್‌ 30ರವರೆಗಿನ ನಾಲ್ಕು ತಿಂಗಳಲ್ಲಿ ಒಟ್ಟು 845 ಮಿ.ಮೀ ಮಳೆ ಸುರಿಯಬೇಕಿತ್ತು. ಆದರೆ, 635...
- Advertisement -
error: Content is protected !!