- ಜಯಶ್ರೀ ಬಿ. ಕದ್ರಿ
response@134.209.153.225
ನನಗೆ ಮೊದಲಿನಿಂದಲೂ ವಾಹನಗಳೆಂದರೆ ಒಂದಿಷ್ಟು ಭಯ. ಮನೆಯಲ್ಲಿ ಕಾರು, ಕೈನೆಟಿಕ್ ಹೀಗೆಲ್ಲ ಇದ್ದರೂ ನನಗೆ ಡ್ರೈವಿಂಗ್ ಎಂದರೆ ಗಡಿಬಿಡಿ. ಹೀಗಾಗಿಯೇ ನಾನು ಗಂಡ, ಮಗಳು ಹೀಗೆ ನುರಿತವರು ಇಲ್ಲದೆ ಕಾರಿನಲ್ಲಿ ಪ್ರಯಾಣಿಸುವುದು ಕಡಿಮೆ.
ನಮ್ಮ ಮನೆಗೆ ಬಸ್ಸ್ಟ್ಯಾಂಡಿನಿಂದ, ನಾನು ಕೆಲಸ ಮಾಡುವ ಸಂಸ್ಥೆಯಿಂದ ಕೊಂಚ ದೂರ ಇರುವ ಕಾರಣ, ನಡೆಯುವುದು ಮೈಗೆ ಒಳ್ಳೆಯದೆಂದು ಡಾಕ್ಟರ್ ಕಾಳಜಿಯಿಂದ ಹೇಳಿದ್ದರೂ ಸಮಯ ಸಾಲದೆಂದೋ, ಶುದ್ಧ ಸೋಂಬೇರಿತನದಿಂದಲೋ ನಾನು ಆಟೋಗಳಲ್ಲೇ ಓಡಾಡುತ್ತಿರುತ್ತೇನೆ. ಹೀಗೆ ಓಡಾಡುವಾಗ ಈ ಶ್ರಮಿಕ ವರ್ಗದವರ ಮಾನವೀಯ ಕಾಳಜಿ, ದುಡಿದು ತಿನ್ನುವ ಛಲ, ವ್ಯಕ್ತಿತ್ವದ ಆದ್ರ್ರತೆ ನನ್ನನ್ನು ಕಾಡುತ್ತಿರುತ್ತದೆ. ವೈಟ್ಕಾಲರ್ ಹುದ್ದೆಗಳಲ್ಲಿರುವವರಷ್ಟೇ ಇವರನ್ನು ನಾನು ಗೌರವಿಸುತ್ತೇನೆ.
ರಿಕ್ಷಾ ಚಾಲಕರು ನಗರದ ಜೀವನಾಡಿ ಇದ್ದಂತೆ. ದೇಶದ ಸಾಮಾಜಿಕ ಆಗುಹೋಗುಗಳು, ರಾಜಕೀಯ ಒಳನೋಟಗಳು, ಹವಾಮಾನ, ಸಣ್ಣ ಪುಟ್ಟ ಗಾಸಿಪ್, ನಗರದ ಜಾತ್ರೆ ಇತ್ಯಾದಿ ಸಂಭ್ರಮಗಳು ಹೀಗೆ ಇವರೆಲ್ಲ ನನ್ನ ಅಣ್ಣ ತಮ್ಮಂದಿರಂತೆಯೇ ಭಾಸವಾಗುತ್ತಾರೆ. ಇನ್ನು ಇಪ್ಪತ್ತು ನಿಮಿಷಗಳಲ್ಲಿ ಅವರು ಹೇಳುವ ಕತೆಗಳು, ಅನುಭವಗಳು ನಮ್ಮ ಕಣ್ತೆರೆಸಲು ಸಾಧ್ಯ. ಒಮ್ಮೆ ಒಬ್ಬ ಆಟೋದವನಿಗೆ ಫೆÇೀನ್ ಬಂತು. ಮಗದೊಬ್ಬ ಡ್ರೈವರ್ ತನ್ನ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಲಿಯುತ್ತಿದ್ದಾನೆಂದೂ ಸಾಲ ಸೋಲ ಮಾಡಿ ಇಂಜಿನಿಯರಿಂಗ್ ಓದಿಸಿದರೂ ಆತನಿಗೆ ಸರಿಯಾದ ಕೆಲಸ ಸಿಗದ ಬಗ್ಗೆ, ಸಿಕ್ಕಿದರೂ ಸಾಕಷ್ಟು ಸಂಬಳ ಇರದ ಬಗ್ಗೆ ನೋವು ಹೇಳಿಕೊಂಡ ಅದೇ ಸಮಯ ಆತ ಟೀಚರುಗಳ ಬಗ್ಗೆ, ರೈತರ ಬಗ್ಗೆ, ಒಟ್ಟಿನಲ್ಲಿ ವಿನಾಶದಂಚಿದಲ್ಲಿನ ತಳಿಗಳ ಬಗ್ಗೆ ಮಾತನಾಡುತ್ತಿದ್ದ.
ಇನ್ನೊಂದು ಉರಿಬಿಸಿಲಿನ ದಿನ ಮಂಗಳೂರಿನಲ್ಲಿ ಹೋಗುತ್ತಿರಬೇಕಾದರೆ, ಆಟೋ ಡ್ರೈವರ್ ಗ್ಲೋಬಲ್ ವಾರ್ಮಿಂಗ್, ಪ್ರಳಯದ ಸಾಧ್ಯತೆ ಹೀಗೆಲ್ಲ ಕಂಗಾಲಾಗಿ ಚಿಂತಿಸುತ್ತಿದ್ದ. ಕುತೂಹಲಕ್ಕೆಂದು ನಾನು ಅಟೋದವನ ಬಳಿ ನಿಮ್ಮ ಕಸ್ಟಮರ್ ನಿಮಗೆ ಹೇಗೆ ಗೊತ್ತಾಗುತ್ತದೆ ಎಂದು ಕೇಳಿದೆ. “ಅದಾ ತುಂಬ ಸ್ಪೀಡಾಗಿ ಓಡುವವರಿಗೆ ಆಫೀಸಿನ ಗಡಿಬಿಡಿ ಇರುತ್ತದೆ. ಅದೇ ರೀತಿ ಜರಿಸೀರೆ ಉಟ್ಟವರು ಕೂಡಾ. ಇನ್ನು ಕೆಲವರು ಬೇಕೋ ಬೇಡವೋ ಎಂದು ನಡೆಯುವವರು ಒಂದು ಆಟೋ ಬಂದರೆ ಸಾಕು ಹತ್ತಿಕೊಳ್ಳುತ್ತಾರೆ (ನಿಮ್ಮ ತರ ಎಂದು ಆತನ ನಸುನಗೆ ಹೇಳಿತು) ಯಾವುದಕ್ಕೂ ಇರಲಿ ಎಂದು ಪ್ರತಿ ತಿರುವಿನಲ್ಲೂ ಒಂದು ಹಾರ್ನ್ ಶಬ್ದ ಕೇಳಿಸುತ್ತೇನೆ ಎಂದ. ಇದರಿಂದ ತನ್ನ ಡಿಗ್ನಿಟಿ, ನಡೆಯುವವರ ಗೌರವ ಎರಡೂ ಉಳಿಯುತ್ತದೆ ಎನ್ನುವುದು ಅವನ ಅಭಿಮತ. ಇನ್ನು ಮಂಗಳೂರಿನ ಆಟೋದವರು ಮೀಟರ್ ಹಾಕಿಯೇ ಆಟೋ ಚಲಾಯಿಸುವುದರಿಂದ ಮೋಸ ಹೋಗಿಲ್ಲ ಎಂದೇ ಹೇಳಬೇಕು. ಅದೇ ಬೆಂಗಳೂರು ಇನ್ನಿತರ ನಗರಗಳಿಗೆ ನಮ್ಮ ಮಂಗಳೂರು ಕನ್ನಡ ಕೇಳಿಯೇ ಅದ್ಭುತವಾಗಿ ಯಾಮಾರಿಸಲ್ಪಟ್ಟ ಅನುಭವವಾಗಿದೆ.
ಇನ್ನು ಮಂಗಳೂರಿನ ಆಟೋಗಳು ಮಳೆಗಾಲಕ್ಕೆ ಸಕಲ ರೀತಿಯಲ್ಲಿ ಸನ್ನದ್ಧನಾಗಿತ್ತವೆ. ಅದೇ ಕಡಿಮೆ ಮಳೆ ಬರುವ ಊರುಗಳಲ್ಲಿ ಈ ರೀತಿಯ ರೆಕ್ಸಿನ್ ಕರ್ಟನ್ ನೋಡಿದ ಹಾಗಿಲ್ಲ.ಇನ್ನು ಹಳ್ಳಿಗಳಲ್ಲಿ, ಗ್ರಾಮಾಂತರ ಪ್ರದೇಶಗಳೂ ಆಟೋಗಳ ಸಂಖ್ಯೆ ಕಡಿಮೆ ಇರುವ ಕಾರಣ ಹೆಚ್ಚು ದರ ಹೇಳುತ್ತಿರುತ್ತಾರೆ. ಇನ್ನು ನಾನು ದಿನನಿತ್ಯ ನೋಡುವ ಆಟೋದವರೂ ಪರ ಊರಿನವರ ಜತೆ ಬೇರೆ ಬೇರೆ ದರಗಳನ್ನು ಹೇಳುತ್ತಿರುತ್ತಾರೆ. ದೇಶಕ್ಕೆ ಕೋಟಿಗಟ್ಟಲೆ ವಂಚಿಸುವವರ ಮುಂದೆ ಬಹುಶಃ ಇದು ಅಂಥಾ ಅಪರಾಧಅಲ್ಲ. ಬಸ್ಸು, ಕಾರುಗಳನ್ನು ಹೊರತುಪಡಿಸಿದರೆ ಆಟೋಗಳೇ ಜನಸಾಮಾನ್ಯರ ಮಾಧ್ಯಮ, ನಮ್ಮ ನಡಿಗೆಯ ಶ್ರಮವನ್ನು ಕಡಿಮೆಗೊಳಿಸುವ ಈ ಬಾಂಧವರಿಗೊಂದು ನಮನ.