- ದೀಪ್ತಿ
response@134.209.153.225
ಸ್ವಲ್ಪ ಹಳೆಯದು ಎನ್ನಿಸಬಹುದಾದ ಮತ್ತು ಸಾರ್ವಕಾಲಿಕ ಸತ್ಯದಂತೆ ಗೋಚರಿಸುತ್ತಿರುವ ಮಾತೆಂದರೆ ಮಕ್ಕಳು ಮೊಬೈಲ್ ಮತ್ತು ಟಿವಿಯ ವ್ಯಾಮೋಹಕ್ಕೆ ಬಿದ್ದು ಓದಿನ ಹವ್ಯಾಸವನ್ನೇ ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದ ಸತ್ಯವೇ. ಮಕ್ಕಳನ್ನು ಈ ವ್ಯಾಮೋಹದಿಂದ ಬಿಡಿಸಿ ಮತ್ತೆ ಅವರನ್ನು ಓದಿನೆಡೆಗೆ ತರುವ ನಿಟ್ಟಿನಲ್ಲಿ ಬಹಳಷ್ಟು ಹಿರಿಯ ಸಾಹಿತಿಗಳು ಗಂಭೀರವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಸಾಲಿನಲ್ಲಿ ವಿ. ಗಣೇಶ್ ಸಾಗರ ಕೂಡ ಒಬ್ಬರು. ಇವರು ಮಹಾಭಾರತದ ಕತೆಗಳನ್ನು ತುಂಬ ಸರಳವಾಗಿ, ಭಾಷೆಯ ಹೇರುವಿಕೆ ಇಲ್ಲದೆ ಮಕ್ಕಳ ಮನಮುಟ್ಟುವ ರೀತಿಯಲ್ಲಿ ಪುನಃ ಹೆಣೆದು ‘ಭಾರತ ಕಥಾಮಿತ್ರ’ ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ.
ಈ ಪುಸ್ತಕದಲ್ಲಿ, ಮಹಾಭಾರತದಲ್ಲಿ ಬರುವ ಕತೆ ಮತ್ತು ಉಪಕತೆಗಳು ಇಲ್ಲಿ ಬಹಳಷ್ಟು ಚೊಕ್ಕದಾಗಿ ಮತ್ತೆ ನಮ್ಮೆಡೆಗೆ ಬಂದಿವೆ. ಲೇಖಕರೇ ಹೇಳುವ ಹಾಗೆ “ಮಹಾಭಾರತದಲ್ಲಿ ಬರುವ ಕಥೆಗಳು ಹಾಗೂ ಉಪಕಥೆಗಳು ತಮ್ಮದೇ ಆದ ಒಂದು ತತ್ವವನ್ನು ಸೃಷ್ಟಿ ಮಾಡುತ್ತವೆ. ಈ ಕಥೆಗಳ ಮಾಲಿಕೆಯ ಮೂಲಕವೇ ಮತ್ತೊಮ್ಮೆ ಭಾರತದ ಕತೆಯನ್ನು ಹೇಳಬಾರದು ಎಂಬ ಪ್ರಶ್ನೆ ನನ್ನನ್ನು ಕಾಣತೊಡಗಿತು. ಇಂತಹ ಕತೆಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಲೇ ಬೆಳಕು ಕಂಡಿದ್ದರೂ, ನನ್ನೂ ಒಂದು ಕಾಣಿಕೆ ಇರಲಿ ಎಂದು ಈ ಕಥಾಮಾಲಿಕೆಯನ್ನು ಬರೆದಿದ್ದೇನೆ. ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಿದ್ದೇನೆ” ಎನ್ನುತ್ತಾರೆ.
ಇಲ್ಲಿನ ಎಲ್ಲ ಕತೆಗಳು ಬಿಡದೇ ಓದಿಸಿಕೊಂಡು ಹೋಗುತ್ತವೆ. ಬಹುತೇಕವು ನಮಗೆ ಗೊತ್ತಿದ್ದರೂ ಅದರ ಹೇಳುವಿಕೆಯ ಗುಣದಿಂದಾಗಿ ಮತ್ತೆ ನಮ್ಮನ್ನು ಹಿಡಿದಿಡುತ್ತದೆ. ಅದಲ್ಲದೆ ನಮಗೆ ತಿಳಿದಿಲ್ಲದ “ಯುಧಿಷ್ಟಿರನ ಕೋಪಾಗ್ನಿ”, “ತೇನ ವಿನಾ ತೃಣಮಪಿ ನ ಚಲತೇ” ದಂತಹ ಕತೆಗಳು. “ಭೀಮ ಮತ್ತು ಆಂಜನೇಯರ ಭೇಟಿ” “ಅಗ್ನಿಯನ್ನೇ ಜಯಿಸಿದ ಪಕ್ಷಿಗಳು” “ಅರ್ಜುನ ಬಭ್ರುವಾಹನ” ದಂತಹ ಕತೆಗಳು ರೋಚಕವಾಗಿ ನಮ್ಮನ್ನು ಸೆಳೆಯುತ್ತವೆಯಾದರೂ ಮೂಲ ಕತೆಗೆ ಎಲ್ಲಿಯೂ ಧಕ್ಕೆ ತರುವುದಿಲ್ಲ. ಇಲ್ಲಿ ಸುಮಾರು 63 ಕತೆಗಳಿವೆ. ಎಲ್ಲಿಯೂ ಲಂಘಿಸದೆ ನಮ್ಮನ್ನು ಓದಲು ಕಟ್ಟಿ ಹಾಕುವುದು ಇಲ್ಲಿನ ಕತೆಗಳ ವಿಶೇಷತೆ.
ಭಾರತ ಕಥಾಮಿತ್ರ
ಲೇಖಕರು: ವಿ. ಗಣೇಶ್ ಸಾಗರ
ಪ್ರಕಾಶನ: ಆಕಾಶ ಪ್ರಕಾಶನ, ಚಾಮರಾಜಪೇಟೆ, ಬೆಂಗಳೂರು
ಪುಟಗಳು: 308, ಬೆಲೆ: 225 ರೂ.