♦ ಸುನೀತ ಕುಶಾಲನಗರ
newsics.com@gmail.com
ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಬರಹಗಾರರು ಮತ್ತು ಪುಸ್ತಕಗಳ ಪ್ರಕಟಣೆ ಹೆಚ್ಚುತ್ತಿರುವುದು ತುಂಬಾ ಖುಷಿಯ ವಿಚಾರ. ಕವಿತೆ, ಸಣ್ಣಕತೆಗಳು, ಲೇಖನ, ಪ್ರಬಂಧಗಳ ಜೊತೆಗೆ ಕಾದಂಬರಿಗಳು ಕೂಡಾ ಹೊರಬರುತ್ತಿರುವುದು ಹೆಮ್ಮೆ.
ಹಲವು ವರ್ಷಗಳಿಂದ ಗೀತಾ ಮಂದಣ್ಣನವರ ಕಾದಂಬರಿಗಳನ್ನು ಶಕ್ತಿ ಪತ್ರಿಕೆಯಲ್ಲಿ ಓದುತ್ತಾ ಬಂದವರು ನಾವು. ಜಿಲ್ಲೆಯ ಖ್ಯಾತ ಕಾದಂಬರಿಕಾರರಾದ ಭಾರದ್ವಾಜರ ಕಾದಂಬರಿಗಳು ನಾಡಿನ ಓದುಗರ ಗಮನ ಸೆಳೆದಿದೆ. ಕಾಲೂರು ನಾಗೇಶ್, ವಿನೋದ್, ಮನೋಜ್, ಜಲಕಾಳಪ್ಪ, ನೌಷದ್ ಜನ್ನತ್ ಮೊದಲಾದವರು ತಮ್ಮದೇ ಆದ ಕಾದಂಬರಿಗಳ ಮೂಲಕ ಪರಿಚಿತರು.
ಶ್ರೀ ಕಿಗ್ಗಾಲು ಗಿರೀಶ್ ರವರು ಆಡು ಮುಟ್ಟದ ಸೊಪ್ಪಿಲ್ಲವೆಂಬುದಕ್ಕೆ ಪರ್ಯಾಯವಾಗುವ ಹಿರಿಯರು. ಏಕೆಂದರೆ ಸಾಹಿತ್ಯ ಕ್ಷೇತ್ರದ ಎಲ್ಲಾ ಪ್ರಕಾರಗಳಲ್ಲೂ ಕೃಷಿ ಮಾಡಿದ ಕಿಗ್ಗಾಲು ಗಿರೀಶ್ರವರು ನಿಯಮಬದ್ಧವಾಗಿ, ಛಂದೋಬದ್ಧವಗಿ ಬರೆಯುವ ಜಿಲ್ಲೆಯ ಅಪರೂಪದ ಸಾಹಿತಿ. ಇತ್ತೀಚಿನ ದಿನಗಳಲ್ಲಿ ಕೋಳಿ ಕೂಗುವ ಮುನ್ನವೇ ಇವರ ಭಾಮಿನಿ ಷಟ್ಪದಿಗಳ ಮೂಲಕವೇ ಬೆಳಗಾಗುತ್ತಿರುವುದು ಸಾಹಿತ್ಯಾಸಕ್ತರಿಗೆಲ್ಲಾ ತಿಳಿದ ವಿಚಾರ. ಇವರ ಷಟ್ಪದಿಗಳ ಜತೆ ಜತೆಗೆ ಬರುವ ಪದಗಳ ಅರ್ಥಗಳು ಕೂಡಾ ಪದ ಸಂಪತ್ತನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಹಳ್ಳಿಯ ಸುತ್ತ ಇವರ ಚೊಚ್ಚಲ ಕಾದಂಬರಿ. ಇದು ಒಂದು ಸಾಮಾಜಿಕ ಕಾದಂಬರಿಯಾಗಿದ್ದು ಯಾವುದೇ ತ್ರಾಸಿಲ್ಲದೆ ಓದಿಸಿಕೊಂಡು ಹೋಗತ್ತದೆ.
ಕಿಗ್ಗಾಲು ಗಿರೀಶ್ ರವರ ‘ಒಂದು ಹಳ್ಳಿಯ ಸುತ್ತ’ ಕಾದಂಬರಿ ಇವರೊಬ್ಬ ಸಮರ್ಥ ಕಾದಂಬರಿಕಾರರೆಂಬುದನ್ನು ಸಾಬೀತು ಮಾಡಿದೆ. ವಿಶ್ವನಾಥಪುರವೆಂಬ ಹಳ್ಳಿಯ ಸುತ್ತ ಹೆಣೆಯುವ ಅನೇಕ ಪ್ರಸಂಗಗಳು ಕಾದಂಬರಿಯನ್ನು ಬೆಳೆಸಿಕೊಂಡು ಹೋಗುತ್ತದೆ. ಇಲ್ಲಿ ಬರುವ ಕಲ್ಲೇಶ್ವರ ಮೋಟಾರ್ಸ್ ಎಂಬ ಆಗಾಗ್ಗೆ ರಿಪೇರಿ ಆಗುವ ಬಸ್ಸು, ಅಲ್ಲಿರುವ ಒಂದೇ ಒಂದು ರಂಗಪ್ಪನ ಹೋಟೆಲ್, ಅಲ್ಲೊಂದು ಪೆÇಲೀಸ್ ಸ್ಟೇಷನ್, ಬಾಳೆಗೊನೆ ಮತ್ತು ಕೋಳಿ ಕಳ್ಳತನ, ಗದ್ದೆಯಲ್ಲಿ ಗುದ್ದಲಿ ಕಾಣೆಯಾಗೋದು, ಕದ್ದು ಗಾಂಜಾ ಬೆಳೆಯೋದು ಹೀಗೆ ಅನೇಕಾನೇಕ ರೋಚಕ ಘಟನೆಗಳು ಕಾದಂಬರಿಗೆ ಕಂದೀಲು ಹಿಡಿಯುತ್ತಾ ಹೋಗುತ್ತದೆ.
ಮಿಲಟರಿ ಸೇರಿದ ಷಣ್ಮುಗ ಭಟ್ಟರು ಮಂತ್ರ ಕಲಿತು ಪೂಜೆ ಪುರಸ್ಕಾರಗಳಲ್ಲಿ ತೊಡಗಿಸಿಕೊಂಡದ್ದು, ಡಾಕ್ಟರಲ್ಲದಿದ್ದರೂ ಡಾಕ್ಟರಂತೆ ಖ್ಯಾತರಾದ ಪುರಂದರ, ಹೆರಿಗೆ ಮಾಡಿಸುತ್ತಿದ್ದ ಸೀತಮ್ಮ, ಹೆಂಡವೆಂದು ಭಾವಿಸಿ ಮೂತ್ರ ಕುಡಿದದ್ದು ಹೀಗೆ ಲಘು ಹಾಸ್ಯ ಸೇರಿ ಇಂತಹ ಅದೆಷ್ಟೋ ಪಾತ್ರಗಳು ಅಲ್ಲಲ್ಲಿ ನಗು ತರಿಸಿ ಕಾದಂಬರಿಗೆ ಕುತೂಹಲ ಮೂಡಿಸುತ್ತಾ ಹೋಗುತ್ತದೆ.
ವಿಶ್ವನಾಥಪುರದ ಪಕ್ಕದ ಊರು ಮಂಗಳಾಪುರಿ, ಅಲ್ಲಿರುವ ನರ್ಸಿಂಗ್ ಹೋಂ, ನರ್ಸ್ ಮಲ್ಲಿಕಾಳ ಅನುಭವಗಳು ಸೇರಿದಂತೆ ಎಷ್ಟೆಷ್ಟೋ ಸನ್ನಿವೇಶಗಳು ನಮ್ಮ ಆಸುಪಾಸಿನಲ್ಲೆಲ್ಲೋ ನಡೆಯುತ್ತಿರುವಂತೆ ಭಾಸವಾಗಿಸುತ್ತದೆ. ಊರ ಗೌಡರ ಕೂಲಿಯವರಾದ ಚೆನ್ನ, ಚೆನ್ನಿ, ಇವರ ಕುಡಿತದ ಚಟ, ಚೆನ್ನನ ಸಾವು, ಚೆನ್ನಿಯನ್ನು ಗೌಡರು ಮದುವೆಯಾದಾಗ ಚೆನ್ನಿಯ ಬದುಕೇ ಬದಲಾಗುತ್ತದೆ. ಇದನ್ನು ಸಮಾಜ ಸ್ವೀಕರಿಸುವ ರೀತಿಯನ್ನು ಕೂಡಾ ಅಷ್ಟೇ ಸಹಜವಾಗಿ ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಹಳ್ಳಿಯಲ್ಲೊಂದು ಏಕೋಪಾಧ್ಯಾಯ ಶಾಲೆಯಾಗಿ ಅದರ ಸುತ್ತ ಮುಂದುವರೆಯುತ್ತಾ ಹೋಗುವ ಕಾದಂಬರಿಯಲ್ಲಿ ನಾಗೇಶ ಮೇಷ್ಟ್ರು ಚೆನ್ನಿಯ ಹಳೆ ಮನೆಗೆ ಶಾಲೆಯನ್ನು ಸ್ಥಳಾಂತರಿಸಿ ಆ ಶಾಲೆಯನ್ನು ಹಂತ ಹಂತವಾಗಿ ಪ್ರಗತಿಗೆ ತರುತ್ತಾ ಆ ಮೂಲಕ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆಯೂ ಗಮನ ಸೆಳೆಯುತ್ತಾರೆ.
ವಿಶ್ವನಾಥಪುರದಲ್ಲಿ ಹರಿಯುವ ವಿನಿತಾ ನದಿಯ ಸಂಗಮದಂತೆ ಒಂದಾಗುವ ಸೋಮಪ್ಪ, ನಂದಿನಿ ಮತ್ತು ನಾಗೇಶ ಚಂದ್ರಿಕಾ ಇವರ ಮದುವೆಯ ಇತ್ಯರ್ಥದಲ್ಲಿ ಸುಖಾಂತ್ಯವಾಗಿರುವುದು ಕಾದಂಬರಿಗೆ ಮತ್ತಷ್ಟು ಸಕಾರಾತ್ಮಕ ಜೀವ ತುಂಬಿದೆ. ಕಾದಂಬರಿಕಾರರ ಪದಬಳಕೆ, ಹೋಲಿಕೆ, ಕಲ್ಪನೆಗಳು ಕಾದಂಬರಿಯ ತೂಕವನ್ನು ಹೆಚ್ಚಿಸಿದೆ. “ಹೊಟ್ಟೆಯನ್ನು ಗುಟ್ಟಾಗಿ ಇಳಿಸಿ ” ಈ ರೀತಿಯ ಕೆಲವು ವಾಕ್ಯಗಳು ಇವರ ಓದಿನ ವಿಸ್ತಾರವನ್ನು ಓದುಗರಿಗೆ ತಲುಪಿಸುತ್ತದೆ. ಕಾದಂಬರಿಯನ್ನು ಹೊರತರುವಲ್ಲಿ ಯಶಸ್ವಿಯಾದ ಕಿಗ್ಗಾಲು ಗಿರೀಶ್ ರವರು ಮರಳಿ ಅರಳುತ್ತಾ ಸಾಹಿತ್ಯ ಭಂಡಾರವನ್ನು ಸಮೃದ್ಧಿಯಾಗಿಸುವರೆಂಬ ಭರವಸೆಯನ್ನು ಸಾರಿದ್ದಾರೆ. ಉತ್ತಮ ಮುಖಪುಟವನ್ನು ಹೊಂದಿದ ಈ ಪುಸ್ತಕದಲ್ಲಿ 136 ಪುಟಗಳಿದ್ದು, ನೂರಾ ಇಪ್ಪತೈದು ರೂಪಾಯಿ ಬೆಲೆಯ ಈ ಕಾದಂಬರಿಯನ್ನು ನಾವೆಲ್ಲರೂ ಕೊಂಡು ಓದೋಣ.