♦ ಅನಿತಾ ಬನಾರಿ
newsics.com@gmail.com
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಕನ್ನಡತಿ’ಯಲ್ಲಿ ನಾಯಕಿ ಭುವನೇಶ್ವರಿ ಆಲಿಯಾಸ್ ಸೌಪರ್ಣಿಕಾ ಆಗಿ ಅಭಿನಯಿಸುತ್ತಿರುವ ರಂಜನಿ ರಾಘವನ್ ಕತೆಗಾರ್ತಿಯಾಗಿಯೂ ಮೋಡಿ ಮಾಡಿದ್ದಾರೆ.
ಮೊದಲಿನಿಂದಲೂ ಬರೆಯುವ ಹವ್ಯಾಸ ಹೊಂದಿರುವ ರಂಜನಿ ರಾಘವನ್ ಇದೀಗ ಸಾಹಿತಿಯಾಗಿಯೂ ಬಡ್ತಿ ಪಡೆದಿದ್ದಾರೆ. ಅಂದಹಾಗೆ ರಂಜನಿ ರಾಘವನ್ ಅವರ ಮೊದಲ ಕಥಾ ಸಂಕಲನ ‘ಕತೆಡಬ್ಬಿ’ ಇಂದು ಬಿಡುಗಡೆಗೊಂಡಿದ್ದು ರಂಜನಿ ಅವರಂತೂ ತುಂಬಾ ಸಂತಸದಲ್ಲಿದ್ದಾರೆ.
ರಂಜನಿ ರಾಘವನ್ ಅವರು ಸಣ್ಣ ಕಥೆಗಳನ್ನು ಬರೆಯುತ್ತಿದ್ದು ಅವಧಿ ಆನ್ಲೈನ್ ವೇದಿಕೆಯಲ್ಲಿ ಅದನ್ನು ಪ್ರಕಟಿಸುತ್ತಿದ್ದರು. ಶುಕ್ರವಾರದ ಸಣ್ಣ ಕಥೆಗಳು ಹೆಸರಿನಲ್ಲಿ 15 ವಾರಗಳ ಕಾಲ ಅವರ ಸಣ್ಣ ಕಥೆ ಪ್ರಕಟವಾಗಿತ್ತು. ಇದೀಗ ಆ ಕತೆಗಳಿಗೆ ಪುಸ್ತಕದ ರೂಪ ದೊರೆತಿದ್ದು ಕತೆಡಬ್ಬಿಯಾಗಿ ನಿಮ್ಮ ಮುಂದೆ ಬಂದಿದೆ. ಬಹುರೂಪಿ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದ್ದು ಈ ಪುಸ್ತಕ ಓದುಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.
ಕನ್ನಡ ಕಥಾಲೋಕಕ್ಕೆ ಹೊಸ ಹೊಸ ಓದುಗರನ್ನು ಕರೆತರಬೇಕು ಎಂಬುದೇ ನನ್ನ ಪ್ರಮುಖ ಗುರಿ. ನನ್ನ ಕಥೆಗಳಿಗೆ ಸಿಕ್ಕಿರುವ ಪ್ರತಿಕ್ರಿಯೆ ಕಂಡು ನನಗೆ ತುಂಬಾ ಸಂತಸವಾಗಿದೆ. ಅದರ ಜತೆಗೆ ನನ್ನ ಮೊದಲ ಕಥಾಸಂಕಲನವೂ ಬಿಡುಗಡೆಯಾಗಿದೆ. ಒಂದೆಡೆ ಬಹಳ ಖುಷಿಯಾದರೆ, ಮತ್ತೊಂದೆಡೆ ಕೊಂಚ ಭಯವೂ ಇದೆ ಎನ್ನುತ್ತಾರೆ, ರಂಜನಿ ರಾಘವನ್.
ಇನ್ನು ಕಥೆಗಳ ಮೂಲಕ, ಕಥಾಸಂಕಲನದ ಮೂಲಕ ಸದ್ದು ಮಾಡುತ್ತಿರುವ ರಂಜನಿ ಬರವಣಿಗೆ ಲೋಕಕ್ಕೆ ಹೊಸಬರೇನಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಷ್ಟದೇವತೆ ಧಾರಾವಾಹಿಗೆ ಕಥೆ, ಚಿತ್ರಕಥೆ ಬರೆಯುತ್ತಿದ್ದ ರಂಜನಿ ಕ್ರಿಯೆಟಿವ್ ಡೈರೆಕ್ಟರ್ ಆಗಿಯೂ ಕಾಣಿಸಿಕೊಂಡಿದ್ದರು.
ಪೌರಾಣಿಕ ಧಾರಾವಾಹಿ ಕೆಳದಿ ಚೆನ್ನಮ್ಮ ಧಾರಾವಾಹಿಯಲ್ಲಿ ನಾಗವೇಣಿ ಎನ್ನುವ ಸಣ್ಣ ಪಾತ್ರದ ಮೂಲಕ ನಟನಾ ಜಗತ್ತಿಗೆ ಕಾಲಿಟ್ಟ ರಂಜನಿ ಮುಂದೆ ಆಕಾಶದೀಪ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸಿದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಪುಟ್ಟ ಗೌರಿಯಾಗಿ ಅಭಿನಯಿಸಿದ ರಂಜನಿ ಕರುನಾಡಿನಾದ್ಯಂತ ಮನೆಮಾತಾದರು.
ಮಲಯಾಳಂನ ಪೌರ್ಣಮಿ ತಿಂಗಳ್ ಧಾರಾವಾಹಿಯಲ್ಲಿ ನಾಯಕಿ ಪೌರ್ಣಮಿ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲೂ ಮಿಂಚಿದ್ದಾರೆ. ರಾಜಹಂಸ ಸಿನಿಮಾದ ಮೂಲಕ ಹಿರಿತೆರೆಗೆ ಕಾಲಿಟ್ಟ ರಂಜನಿ ಟಕ್ಕರ್, ಸತ್ಯಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕ್ಷಮಿಸಿ ‘ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾದಲ್ಲಿ ನಟಿಸಿರುವ ರಂಜನಿ ‘ಹಕೂನಾ ಮಟಾಟ’ ಎಂಬ ವೆಬ್ ಸಿರೀಸ್ನಲ್ಲಿಯೂ ಅಭಿನಯಿಸಲಿದ್ದಾರೆ.