• ಶಿವಾನಂದ್ ಕರೂರ್ ಮಠ್,
ಶಿಕ್ಷಕರು, ಶ್ರೀ ಸೋಮೇಶ್ವರ ವಿದ್ಯಾಲಯ. ದಾವಣಗೆರೆ
newsics.com@gmail.com
ಬರಲಿದೆ ಹೊಸ ವರುಷ
ತರಲಿ ಎಲ್ಲರ ಬಾಳಲಿ ಹರುಷ
ನೋವು ದ್ವೇಷಗಳ ಕಳೆದು
ಸ್ನೇಹ ಸಂಬಂಧವ ಕೂಡುತ
ಶುರುವಾಗಲಿ ಸುಖದ ಪರ್ವವು
ಮೊಳಗಲಿ ಕೀರ್ತಿ ಅನಂತವು
ಬರಲಿ ಹೊಸ ವರುಷ ಬಾಳಲಿ
ಹೊಸ ಚೈತನ್ಯ ಮೂಡಲಿ
ಗುರಿಯ ತಟ ಸನಿಹವಾಗಲಿ
ಸಕಲವೂ ಶುಭವಾಗಲಿ…
ಗತಿಸಿದ ಅವಮಾನಗಳೆಲ್ಲವೂ
ಸನ್ಮಾನವಾಗಿ ಸಜ್ಜನರ ಮುಡಿಗೇರಲಿ
ಬರಲಿ ಹೊಸ ವರುಷ ಬಾಳಲಿ
ಕಷ್ಟಗಳನು ತಳ್ಳೋಣ ಪಾಳು ಗುಂಡಿಗೆ
ಸಕಲಗಳನು ಮೆಟ್ಟುವ ಮೂಡಲಿ ಗುಂಡಿಗೆ
ಇಷ್ಟಗಳನು ಸಾಧಸಿ ಹಂಚೋಣ ಮಂಡಿಗೆ
ಛಲವು ಮೂಡಲಿ ಮೊಗದಲಿ
ಫಲವು ದೊರೆಯಲಿ ಯುಗದಲಿ
ಬರಲಿ ಹೊಸ ವರುಷ ಬಾಳಲಿ
ಒಣಗಿದ ಬೀಜ
ಭುವಿಯ ನೀರಿನ ಸೆಲೆಗೆ ಸಿಕ್ಕು
ಮೊಳೆತು ಹಸಿರಾಗುವಂತೆ,
ಬಂಜೆಯ ಒಡಲಲಿ
ಹೊಸ ಜೀವದ ಸುಳಿವಿನ
ಖುಷಿಯ ಕೊಟ್ಟಂತೆ,
ಸುಡು ಬಿಸಿಲಲಿ ವರುಣ
ಧರೆಗೆ ಗಂಗೆಯನು
ಧಾರೆ ಎರೆದಂತೆ
ಜೊತೆಯಾಗಲಿ ಬರುವ ದಿನಗಳು
ನಮ್ಮೆಲ್ಲರನು ಸ್ವಾಗತಿಸಿ
ಸುಖದ ಹೂಮಳೆಗೈವಂತೆ,
ಬರಲಿ ಹೊಸ ವರುಷ ಬಾಳಲಿ
ತರಲಿ ಹರುಷವ ಬರುವ ದಿನಮಾನಗಳಲಿ.