ವಿಶ್ವಕೋಶ ರಸಯಾತ್ರೆ – 4
* ನವೀನ್ ಕಲ್ಗುಂಡಿ
response@134.209.153.225
ksn.bird@gmail.com
ಹೌದು! ಆ ದಿನವೂ ಇತ್ತು! ವಿಶ್ವಕೋಶದ ಸಂದರ್ಭ. ಕುಪ್ಪಳಿಯ ಕವಿಶೈಲವನ್ನು ಚಿತ್ರೀಕರಿಸಲು ಅನುಮತಿ ಕೇಳಿದ್ದೆವು. ಬಹಳ ಪ್ರೀತಿಯಿಂದ ಕೊಟ್ಟರು. ಅವರಿಗೆ ಬಿಡುವಿರಲಿಲ್ಲವಾಗಿ ಬರಲಾಗದು ನೀವು ಹೋಗಿ ಮಾಡಿಕೊಳ್ಳಿ ಎಂದಿದ್ದರು. ಹೋದೆವು. ಅಲ್ಲಿನ ಸಮಕಾರ್ಯದರ್ಶಿ ಪ್ರಕಾಶ್ ಕಡಿದಾಳ್ ಅವರ ಆತ್ಮೀಯತೆಯಿಂದ ತೋಯ್ದುಹೋದೆವು! ಅದೆಷ್ಟು ಒಪ್ಪ-ಓರಣವಾಗೀ ಕುವೆಂಪು ಸ್ಮಾರಕವನ್ನು ಕಾಪಾಡಿಕೊಂಡು ಬಂದಿದ್ದಾರೆ! ಇವರ ಶ್ರಮಕ್ಕೆ ಒಂದು ನಮಸ್ಕಾರ! ಇವರು ಹಾಗೂ ಅಲ್ಲಿ ಸಿಬ್ಬಂದಿ ಕುವೆಂಪು ಮನೆಯ ಇಂಚಿಂಚನ್ನೂ ತೋರಿಸಿದರು. ಎಲ್ಲವನ್ನು ಚಿತ್ರೀಕರಿಸಿಕೊಂಡೆವು. ಅದೊಂದು ಕೃತಾರ್ಥತೆಯ ಕ್ಷಣ. ನಮ್ಮ ಕೆಲಸವಾದ ಮೇಲೆ ಪ್ರಕಾಶರು ಬಲವಂತವಾಗಿ ಪಕ್ಕದಲ್ಲೇ ಇರುವ ಹೊಟೇಲಿಗೆ ಕರೆದೊಯ್ದು ಊಟ ಹಾಕಿಸಿದರು! ಕನಸಿನಂತಹ ದಿನವದು! ಕುವೆಂಪು ಮನೆಯ ವಿಡಿಯೋದ ಸುಮಾರು ಭಾಗ ಕನ್ನಡ ವಿಶ್ವಕೋಶದಲ್ಲಿದೆ. ಇದಕ್ಕೆ ಕಾರಣ ಮಾನ್ಯ ಪೂರ್ಣಚಂದ್ರ ತೇಜಸ್ವಿ ಮತ್ತು ಪ್ರಕಾಶ್ ಕಡಿದಾಳ್. ಇವರಿಗೆ ಕನ್ನಡ ಜನತೆ ಕೃತಜ್ಞರಾಗಿರಬೇಕು.
ತೇಜಸ್ವಿಯವರೊಂದಿಗೆ ದಿನಪೂರ ಹಕ್ಕಿಗಳನ್ನು ಕುರಿತು ಮಾತಾಡಬೇಕು ಎಂದು ಕೊಂಡಿದ್ದೆ! ಅದು ಆಗಲೇ ಇಲ್ಲ! ರಾಜೇಶ್ವರಿಯವರು ಬರೆದಿದ್ದಾರೆ: “ತೇಜಸ್ವಿ ಬೇಕು” ಎಂದು. ಅದು ನಮ್ಮ ಅಂತರಂಗದ ಬಯಕೆಯೂ ಸಹ.
ಅಲ್ಲಿನ ಪ್ರಸಿದ್ಧ ಅಡುಗೆ ಮನೆ, ಕುಂದಾದ್ರಿಯ ನೋಟ, ಅಜ್ಜಯ್ಯನ ಅಭ್ಯಂಜನದ ಬಚ್ಚಲು ಮನೆ, ಬಡಬಾಗ್ನಿಯ ಮರಿಯಂತಹ ಒಲೆ! ದೇವರು ರುಜುಮಾಡುತ್ತಿರುವುದನ್ನು ನೋಡುತ್ತಾ ರಸವಶನಾಗುವ ಕವಿ ಕುವೆಂಪು….”ಮಲೆನಾಡಿನ ಚಿತ್ರಗಳು” ಕಣ್ಣೆದುರಿಗೆ… ಮತ್ತೆ ಬರುವವೇ ಆ ದಿನಗಳು!