ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವುದಿಲ್ಲ ಎಂದ ರಾಜ್ಯಗಳಿಗೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಸಿಎಎ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಿಗೆ ರವಿಶಂಕರ ಪ್ರಸಾದ್ ಈ ಎಚ್ಚರಿಕೆ ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯಿಂದ ಯಾವ ರಾಜ್ಯಗಳೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದಲ್ಲಿ ಅದು ಸಂವಿಧಾನ ವಿರೋಧಿ ಕ್ರಮವಾಗುತ್ತದೆ ಎಂದು ತಿಳಿಸಿದ್ದಾರೆ.
ಹಲವು ರಾಜ್ಯಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಯ್ದೆ ಅನುಷ್ಠಾಕ್ಕೆ ಹಿಂದೆ ಸರಿಯುತ್ತಿವೆ. ಇಂತಹ ರಾಜ್ಯಕ್ಕೆ ಮತ್ತೊಮ್ಮೆ ಎಚ್ಚರಿಕೆ ನೀಡುತ್ತೇವೆ. ಕಾಯ್ದೆ ಬಗ್ಗೆ ಸೂಕ್ತ ಕಾನೂನು ಸಲಹೆ ಪಡೆದುಕೊಳ್ಳಿ. ಪೌರತ್ವ ಕಾಯ್ದೆ ಜಾರಿ ಮಾಡಲು ಸಂಸತ್ತಿಗೆ ಸಂಪೂರ್ಣ ಹಕ್ಕಿದ್ದು, ಆರ್ಟಿಕಲ್ 245 ಹಾಅಗೂ 256 ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ.
ಸಂಸತ್ತು ರಚಿಸಿದ ಯಾವುದೇ ಕಾನೂನು ಅಮಾನ್ಯವೆಂದು ಪರಿಗಣಿಸಲು ಬರುವುದಿಲ್ಲ. ಅದು ಪ್ರಾದೇಶಿಕ ಮಾನ್ಯತೆಯನ್ನು ಒಳಗೊಂಡಿರುತ್ತದೆ. ಸಂವಿಧಾನಿಕ ನಿಬಂಧನೆಗಳ ಬಗ್ಗೆ ರಾಜ್ಯಗಳು ಕಾನೂನು ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಿಎಎ ಜಾರಿ ವಿರೋಧಿಸಿದ ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ
Follow Us