ಭೂಪಾಲ್: ಪ್ರತಿ ವರ್ಷದಂತೆ ಈ ಬಾರಿಯೂ ಮಧ್ಯಪ್ರದೇಶದಲ್ಲಿ ಮಿಡತೆಗಳ ಹಾವಳಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಧ್ಯಪ್ರದೇಶದ 15 ಜಿಲ್ಲೆಗಳಲ್ಲಿ ಮಿಡತೆಗಳ ಹಾವಳಿ ಮಿತಿಮೀರಿದ್ದು, ಲಕ್ಷಾಂತರ ಮಿಡತೆಗಳಿಂದಾಗಿ ಭಾರೀ ಪ್ರಮಾಣದ ಬೆಳೆ ನಾಶವಾಗಿದೆ.
ಕಳೆದ ಮೂರು ದಿನಗಳಿಂದ ಈ ಜಿಲ್ಲೆಗಳಲ್ಲಿ ಮರುಭೂಮಿ ಜಾತಿಯ ಲಕ್ಷಾಂತರ ಮಿಡತೆಗಳು ಏಕಕಾಲದಲ್ಲಿ ದಾಳಿ ಮಾಡಿದ್ದು, ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ. ಅಗರ್, ಮಾಲ್ವಾ, ಉಜ್ಜೈನಿ, ಪನ್ಬಿಹಾರ್, ನಿಮುಚ್, ಗುರ್ಜರ್ ಖೇಡಿಯ, ನಯಾಗಾಂವ್, ಹನುಮಾಂಟಿಯಾ ಮೊದಲಾದ ಜಿಲ್ಲೆಗಳ ಮರ-ಗಿಡಗಳು ಮತ್ತು ಬೆಳೆಗಳ ಮೇಲೆ ದಾಳಿ ಮಾಡಿರುವ ಕೀಟಗಳು ಅವುಗಳನ್ನು ನಾಶಗೊಳಿಸುತ್ತಿವೆ.
ಮರುಭೂಮಿ ಮಿಡತೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ನಷ್ಟದ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.