♦ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮುಳುಗಡೆ
ಗುವಾಹಟಿ: ಅಸ್ಸಾಂನ 30 ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರಿದಿದ್ದು, ಭೀಕರ ಪ್ರವಾಹ ಉಂಟಾಗಿದೆ. ಇದರಿಂದ 53,99,017 ಜನರು ಸಂಕಷ್ಟಕ್ಕೀಡಾಗಿದ್ದಾರೆ.
ಪ್ರವಾಹ ಸಂಬಂಧಿ ಪ್ರಕರಣಗಳಲ್ಲಿ ಒಟ್ಟೂ 102 ಮಂದಿ ಮೃತಪಟ್ಟಿದ್ದು, ನೆರೆಯಿಂದಾಗಿ 76, ಭೂ ಕುಸಿತದಿಂದ 26 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಜಿಲ್ಲಾಡಳಿತದ ನೆರವಿನೊಂದಿಗೆ ರಾಜ್ಯ ವಿಪತ್ತು ದಳದ ಸಿಬ್ಬಂದಿ 2,389 ಜನರನ್ನು ರಕ್ಷಿಸಿದ್ದಾರೆ. ಅಸ್ಸಾಂನ 3,014 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದ್ದು, 1,27,955,33 ಹೆಕ್ಟೇರ್ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ. 487 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮುಳುಗಡೆಯಾಗಿದ್ದು, 76 ಪ್ರಾಣಿಗಳು ಮೃತಪಟ್ಟಿವೆ. 170 ಪ್ರಾಣಿಗಳನ್ನು ರಕ್ಷಿಸಲಾಗಿದೆ. ಖಡ್ಗಮೃಗಗಳ ಮುಖ್ಯ ಆವಾಸ ಸ್ಥಾನ ಎನಿಸಿರುವ ಉದ್ಯಾನದಲ್ಲಿ ಪ್ರಾಣಿಗಳು ಸಂಕಷ್ಟಕ್ಕೆ ಸಿಲುಕಿವೆ.