ಬೆಂಗಳೂರು: ವಿಜ್ಞಾನ ಕಾರ್ಯಕ್ರಮದ ಮೂಲಕ ಹೊಸ ವರ್ಷದ ಮೊದಲನೇ ಕಾರ್ಯಕ್ರಮ ಆರಂಭಿಸಿರುವುದು ನನಗೆ ಸಂತಸ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಯ ಮೇಲೆ ಧನಾತ್ಮಕ ಮತ್ತು ಆಶಾವಾದ ಭಾವನೆ ಹೊಂದುವ ಮೂಲಕ 2020 ನ್ನು ಆರಂಭಿಸಿದರೆ ಅದು ನಮ್ಮ ಕನಸು ನನಸಾಗಿಸುವುದರತ್ತ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನೆಗಳಿಗೆ ಆಧುನಿಕ ಜಗತ್ತು ಬೆಸೆದುಕೊಂಡಿದೆ ಎಂದರು.
ವಿಜ್ಞಾನ ಮತ್ತು ಸಂಶೋಧನಾ ಕೊಂಡಿಯಾಗಿರುವ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ನನಗೆ ತುಂಬಾ ಸಂತಸ ಉಂಟುಮಾಡಿದೆ ಎಂದು ತಿಳಿಸಿದರು.
ಆವಿಷ್ಕಾರ ಸೂಚ್ಯಂಕದಲ್ಲಿ 52ನೇ ಸ್ಥಾನ ಪಡೆಯುವ ಮೂಲಕ ಭಾರತ ರಾ,್ಯಂಕಿಗ್ ಸುಧಾರಿಸಿರುವುದನ್ನು ಕೇಳಿ ಸಂತೋಷವಾಯಿತು. ಕಳೆದ 50 ವರ್ಷಗಳಿಗಿಂತ ಕಳೆದ 5 ವರ್ಷಗಳಲ್ಲಿ ನಮ್ಮ ಯೋಜನೆಗಳು ತಂತ್ರಜ್ಞಾನ ಆಧಾರಿತ ವ್ಯವಹಾರವನ್ನು ಹೆಚ್ಚಿಸಿದೆ ಎಂದು ಸರ್ಕಾರದ ಕಾರ್ಯವನ್ನು ಶ್ಲಾಘಿಸಿದರು.
ಆವಿಷ್ಕಾರ, ಪೇಟೆಂಟ್, ಉತ್ಪನ್ನ ಮತ್ತು ಏಳಿಗೆ ಈ ನಾಲ್ಕು ಹೆಜ್ಜೆಗಳು ನಮ್ಮ ದೇಶವನ್ನು ವೇಗದ ಅಭಿವೃದ್ಧಿಯೆಡೆಗೆ ಕೊಂಡೊಯ್ಯಲಿದೆ. ಇದು ನಮ್ಮ ದೇಶದ ಯುವ ವಿಜ್ಞಾನಿಗಳಿಗೆ ನಾನು ಬೋಧಿಸುವ ಧೇಯ್ಯ ವಾಕ್ಯ ಎಂದು ಹೇಳಿದರು.
ಚಂದ್ರಯಾನ-2 ಸಮಯದಲ್ಲಿಯೂ ಬೆಂಗಳೂರಿಗೆ ಬಂದಿದ್ದೆ. ಈ ವೇಳೆ ಇಡೀ ದೇಶದ ಜನರು ಕಣ್ಣು ಚಂದ್ರಯಾನದ ಮೇಲೆ ನೆಟ್ಟಿತ್ತು. ಅಂದು ನಮ್ಮ ದೇಶದ ಜನರು ವಿಜ್ಞಾನ, ಬಾಹ್ಯಾಕಾಶ ಕಾರ್ಯಕ್ರಮ ಮತ್ತು ನಮ್ಮ ವಿಜ್ಞಾನಿಗಳ ಬಲವನ್ನು ಸಂಭ್ರಮಿಸಿದ ಕ್ಷಣ ಯಾವಾಗಲೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.
ಆವಿಷ್ಕಾರ ಮಾಡಲು ಇಡೀ ವಿಶ್ವವೇ ಬೆಂಗಳೂರಿನತ್ತ ಬರುತ್ತಿದೆ. ಅಭಿವೃದ್ಧಿಗಾಗಿ ಈ ನಗರ ಉತ್ತಮವಾದ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಪ್ರತಿಯೊಬ್ಬ ಯುವ ವಿಜ್ಞಾನಿ, ಸಂಶೋಧಕ ಮತ್ತು ಇಂಜಿನಿಯರ್ ಈ ನಗರದೊಂದಿಗೆ ಸಂಪರ್ಕ ಹೊಂದಲು ಬಯಸುತ್ತಾರೆ ಎಂದು ಪ್ರಧಾನಿ ಬೆಂಗಳೂರನ್ನು ಕೊಂಡಾಡಿದರು.
ವಿಜ್ಞಾನ ಕಾರ್ಯಕ್ರಮದೊಂದಿಗೆ 2020 ಆರಂಭಕ್ಕೆ ಪ್ರಧಾನಿ ಸಂತಸ
Follow Us