ಕೊಲ್ಕತ್ತಾ: ಆಂಬುಲೆನ್ಸ್’ಗೆ ಹತ್ತಿಸುವಂತೆ ಗೋಗರೆದರೂ ಜನರು ಸಹಾಯಕ್ಕೆ ಬಾರದ್ದರಿಂದ ಅನಾರೋಗ್ಯಪೀಡಿತ ವೃದ್ಧರೊಬ್ಬರು ಆಂಬುಲೆನ್ಸ್ ಏರಲಾರದೆ ರಸ್ತೆಯಲ್ಲೇ ಕುಸಿದು ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದ ಬೋಂಗೌನ್ ನಲ್ಲಿ ಭಾನುವಾರ ನಡೆದಿದೆ.
68 ವರ್ಷದ ಮಾಧವ್ ನಾರಾಯಣ್ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಆಸ್ಪತ್ರೆಯೊಂದಕ್ಕೆ ಭಾನುವಾರ ಸಂಜೆ ಕರೆತರಲಾಗಿತ್ತು. ಅವರನ್ನು ಅಲ್ಲಿ ಶಂಕಿತ ಕೊರೋನಾ ರೋಗಿಗಳ ವಾರ್ಡ್’ಗೆ ದಾಖಲಿಸಲಾಗಿತ್ತು. ರಾತ್ರಿ 8 ರ ಹೊತ್ತಿಗೆ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳಿದರು. ಈ ಆಸ್ಪತ್ರೆ ಸುಮಾರು 80 ಕಿ.ಮೀ. ದೂರದಲ್ಲಿತ್ತು. ಕೂಡಲೇ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದ್ದರೂ ಅದಕ್ಕೆ ಹತ್ತಲು ಮಾಧವ್ ಆವರಿಗೆ ಸಾಧ್ಯವಾಗಲಿಲ್ಲ. ಅವರನ್ನು ಆಂಬುಲೆನ್ಸ್ ಗೆ ಹತ್ತಿಸಲು ಪತ್ನಿ ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಅಲ್ಲೇ ಇದ್ದವರ ನೆರವು ಕೇಳಿದರೂ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಸ್ಥಳದಲ್ಲೇ ಪಿಪಿಇ ಸೂಟು ಧರಿಸಿದ್ದ ಆಂಬುಲೆನ್ಸ್ ಚಾಲಕನ ಬಳಿಯೂ ಗೋಗರೆದರು. ಪ್ರಯೋಜನವಾಗಲಿಲ್ಲ. ಸುಮಾರು ಅರ್ಧ ಗಂಟೆ ಬಳಿಕ ವೃದ್ಧ ಅಲ್ಲೇ ಕುಸಿದು ಅಸುನೀಗಿದ್ದಾರೆ.
ಆಂಬುಲೆನ್ಸ್ ಏರಲು ನೆರವಾಗದ ಜನ, ರಸ್ತೆಯಲ್ಲೇ ವೃದ್ಧ ಸಾವು
Follow Us