ಬೆಂಗಳೂರು: ಕೊರೋನಾದಿಂದ ಸಾವನ್ನಪ್ಪಿದ ತಂದೆಯ ಚಿತೆಗೆ ಮಗಳೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಶಕ್ತಿಗಣಪತಿನಗರ ವಾರ್ಡ್ ನಿವಾಸಿ ಅಟೋ ಚಾಲಕರೊಬ್ಬರಿಗೆ ಕೊರೋನಾ ವೈರಸ್ ತಗುಲಿತ್ತು. ಅವರನ್ನು ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಈ ಕುರಿತಂತೆ ಅವರ ಪುತ್ರಿ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡಿದ್ದರು. ಮೃತರ ಕುಟುಂಬದ ಸಹಾಯಕ್ಕೆ ಧಾವಿಸಿದ್ದು ಪುತ್ರಿಗೆ ಧೈರ್ಯ ತುಂಬಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ವೈದ್ಯರು ಹಾಗೂ ಕೊರೋನಾ ವಾರಿಯರ್ಸ್ ಸೂಚನೆಯಂತೆ ಮೃತ ಅಟೋ ಚಾಲಕನ ಪುತ್ರಿ ಪಿಪಿಟಿ ಕಿಟ್ ಧರಿಸಿಕೊಂಡು ಸುಮನಹಳ್ಳಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದಾಳೆ. ಕಕೊರೋನಾ ರೋಗದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಮಾರ್ಗಸೂಚಿಗಳಿವೆ. ಈ ಮಾರ್ಗಸೂಚಿಗಳ ಅನ್ವಯ ಅಂತ್ಯಸಂಸ್ಕಾರ ನಡೆದಿದ್ದು, ಮೃತರ ಕುಟುಂಬದ ಇತರ ಸದಸ್ಯರು ಕ್ವಾರಂಟೈನ್’ನಲ್ಲಿದ್ದರೂ ಮಗಳು ಖುದ್ದು ಅಂತ್ಯಸಂಸ್ಕಾರ ನಡೆಸುವ ಮೂಲಕ ನೋವಿನಲ್ಲೂ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ.