ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮತ್ತೆ 138 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ಮೇ 19 ರಂದು ಜಿಲ್ಲೆಗೆ ವಾಪಸಾಗಿರುವವರ 265 ಜನರ ಪೈಕಿ ಗುರುವಾರ ಗೌರಿಬಿದನೂರು ತಾಲ್ಲೂಕಿನ ನಾಲ್ಕು ಕಾರ್ಮಿಕರಲ್ಲಿ ಕೊರೋನಾ ದೃಢಪಟ್ಟಿತ್ತು. ಅದರ ಬೆನ್ನಲ್ಲೇ ಶುಕ್ರವಾರ ಒಂದೇ ದಿನಕ್ಕೆ ಮತ್ತೆ 47 ಜನರಿಗೆ ಕೊರೋನಾ ತಗುಲಿರುವುದು ಪತ್ತೆಯಾಗಿದೆ.
ಶುಕ್ರವಾರ ಬೆಂಗಳೂರು ಸಂಚಾರ ಪೊಲೀಸ್ ಸಿಬ್ಬಂದಿಗೂ ಸೋಂಕು ತಗುಲಿದ್ದು, ಪೊಲೀಸ್ ವಲಯದಲ್ಲಿ ಆತಂಕ ಮೂಡಿಸಿದೆ. ರಾಮಕೃಷ್ಣ ಹೆಗಡೆ ನಗರದ ನಿವಾಸಿಯಾಗಿರುವ ಕಾನ್ಸ್ಟೆಬಲ್, ಕೊರೋನಾ ಕರ್ತವ್ಯದಿಂದಾಗಿ ಕಳೆದ ತಿಂಗಳೇ ಕುಟುಂಬದವರನ್ನು ಊರಿಗೆ ಕಳುಹಿಸಿದ್ದರು. ಮೇ 20ರಂದು ಇವರು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ವರದಿಯಲ್ಲಿ ಇವರಿಗೆ ಸೋಂಕು ದೃಢಪಡುತ್ತಿದ್ದಂತೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ 3, ಧಾರವಾಡ 2, ತುಮಕೂರು 8, ಚಿಕ್ಕಬಳ್ಳಾಪುರ 47, ಮಂಡ್ಯ 3, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ಬೀದರ್ 9, ಹಾಸನದಲ್ಲಿ 14, ವಿಜಯಪುರ 2, ದಾವಣಗೆರೆ 4 ಪ್ರಕರಣಗಳು ವರದಿಯಾಗಿವೆ, ಬಾಗಲಕೋಟೆ, ಚಿತ್ರದುರ್ಗ ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ.
ದಾವಣಗೆರೆಯ ಇಬ್ಬರು ನವದೆಹಲಿಯಿಂದ ರೈಲಿನಲ್ಲಿ ಹಿಂದಿರುಗಿರುವ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಇಂದಿನ ಸೋಂಕಿತರಲ್ಲಿ ಬಹುತೇಕರು ಮುಂಬೈನಿಂದ ಆಗಮಿಸಿದವರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.