ನವದೆಹಲಿ: ರಾಜ್ಯ ವಿಧಾನಸಭೆಗೆ ನಡೆದ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಜೆಡಿಎಸ್ ಪಕ್ಷದಲ್ಲಿ ಅದರಲ್ಲೂ ಮುಖ್ಯವಾಗಿ ಕುಮಾರ ಸ್ವಾಮಿ ಅವರಲ್ಲಿ ಬಹಳ ಬದಲಾವಣೆ ಕಾಣಿಸಿಕೊಂಡಿದೆ. ಅಲ್ಲಿಯ ತನಕ ರಾಜ್ಯ ಸರ್ಕಾರವನ್ನು ಟೀಕಿಸುವ ಸಂದರ್ಭದಲ್ಲಿ ಒಂದು ಲಕ್ಷ್ಮಣ ರೇಖೆಯನ್ನು ತಮ್ಮಗೆ ತಾವೇ ಹಾಕಿಕೊಂಡಿದ್ದರು. ಉಪ ಚುನಾವಣೆಯ ಬಳಿಕ ಚಿತ್ರಣ ಬದಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ. ಯಾರ ಬಾಹ್ಯ ಬೆಂಬಲದ ಅಗತ್ಯ ಕೂಡ ಇಲ್ಲ. ಬದಲಾದ ರಾಜಕೀಯ ಚಿತ್ರಣದಿಂದಾಗಿ ಕುಮಾರಸ್ವಾಮಿ ಒದಗಿ ಬಂದ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಂಗಳೂರು ಗಲಭೆಯಾಗಿರ ಬಹುದು , ಬೆಂಗಳೂರು ಪ್ರತಿಭಟನೆಯಾಗಿರಬಹುದು. ಕುಮಾರಸ್ವಾಮಿ ವಾಗ್ಬಾಣ ಬಿರುಸುಪಡೆದುಕೊಂಡಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತೋರಿಕೆಯ ವಿರೋಧಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸುತ್ತಿದ್ದಾರೆಯೇ ಎಂಬ ಸಂಶಯ ಕೂಡ ತಲೆದೋರಿದೆ. ಕುಮಾರಸ್ವಾಮಿ ಯಾವುದನ್ನು ಮಾತನಾಡಿದರೂ ಅದರ ಹಿಂದೆ ರಾಜಕೀಯ ಲೆಕ್ಕಚಾರವಂತೂ ಇದ್ದೇ ಇರುತ್ತೆ. ಯಾಕೆಂದರೆ ಅವರು ದೇವೇಗೌಡರ ರಾಜಕೀಯ ಗರಡಿಯಲ್ಲಿ ಪಳಗಿರುವ ರಾಜಕೀಯ ನಾಯಕ.