ಮೈಸೂರು: ವರಕವಿ ಬೇಂದ್ರೆಯವರ ಶಿಷ್ಯ, ಸಾಹಿತಿ ಹಾಗೂ ಭಾಷಾ ವಿಜ್ಞಾನಿ ಡಾ.ಬಿ.ಬಿ.ರಾಜಪುರೋಹಿತ (85) ಮಂಗಳವಾರ ಮೈಸೂರಿನ ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಅಮೆರಿಕದಲ್ಲಿರುವ ರಾಜಪುರೋಹಿತ ಅವರ ಇಬ್ಬರು ಪುತ್ರಿಯರಾದ ಕಲ್ಪನಾ ಮತ್ತು ವಂದನಾ ಕೊರೋನಾ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ.
ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ 1935ರ ಮೇ 20ರಂದು ಜನಿಸಿದ ರಾಜಪುರೋಹಿತ ಅವರು ಕೇರಳ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರ ಉಪನ್ಯಾಸಕರಾಗಿ, ಭಾರತೀಯ ಭಾಷಾ ಸಂಸ್ಥಾನದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಬಳಿಕ ಜಪಾನಿನ ಟೋಕಿಯೊ ಯೂನಿವರ್ಸಿಟಿ ಆಫ್ ಫಾರಿನ್ ಸ್ಟಡೀಸ್ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಸ್ಥಳನಾಮಗಳು ಮತ್ತು ಭಾಷಾವಿಜ್ಞಾನ ಕುರಿತು ಇಂಗ್ಲಿಷ್ನಲ್ಲಿ 10 ಕೃತಿ, ವಚನ ಸಾಹಿತ್ಯ ಕುರಿತು ಕನ್ನಡದಲ್ಲಿ 4 ಹಾಗೂ ಇತರ 10 ಸಾಹಿತ್ಯಕ ಕೃತಿಗಳನ್ನು ರಚಿಸಿದ್ದಾರೆ. 250ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಬೇಂದ್ರೆ ಸಾಹಿತ್ಯ ಕುರಿತು ‘ಬೇಂದ್ರೆ ಸಮಗ್ರ ಕಾವ್ಯ ನಿಘಂಟು’, ‘ಬೇಂದ್ರೆ ಕಾವ್ಯದ ವ್ಯಾಕರಣ’, ‘ಬೇಂದ್ರೆ ಕಾವ್ಯದ ನುಡಿಗಟ್ಟು ಕೋಶ’, ‘ಬೇಂದ್ರೆ ಕಾವ್ಯದಲ್ಲಿ ಪ್ರತಿಮೆ, ಪ್ರತೀಕ ಮತ್ತು ಅಲಂಕಾರ’, ‘ಬೇಂದ್ರೆ ಕಾವ್ಯದ ಜೀವಕೋಶ’ ಎಂಬ ಕೃತಿಗಳನ್ನು ರಚಿಸಿದ್ದರು. ಅಂಬಿಕಾತನಯ ದತ್ತ ಪ್ರಶಸ್ತಿ ಹಾಗೂ ಬೇಂದ್ರೆ ಸಂಶೋಧನಾ ಸಂಸ್ಥೆಯ ‘ಬೇಂದ್ರೆ ಭಾಷಾಶಾಸ್ತ್ರ ರತ್ನ’ ಗೌರವಕ್ಕೆ ರಾಜಪುರೋಹಿತ ಭಾಜನರಾಗಿದ್ದರು.