ಉಡುಪಿ: ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಪೇಜಾವರ ಶ್ರೀಗಳನ್ನು ಕೆಲ ಹೊತ್ತಿನಲ್ಲಿ ಕೆಎಂಸಿ ಆಸ್ಪತ್ರೆಯಿಂದ ಮಠಕ್ಕೆ ಕರೆದೊಯ್ಯಲು ಸಿದ್ಧತೆ ನಡೆದಿದೆ.
ಪೊಲೀಸ್ ಬಿಗಿಭದ್ರತೆಯಲ್ಲಿ ಕೆಎಂಸಿ ವೈದ್ಯರ ತಂಡ ವೆಂಟಿಲೇಟರ್ ನೆರವಿನೊಂದಿಗೆ ಪೇಜಾವರ ಶ್ರೀಗಳನ್ನು ಅತ್ಯಾಧುನಿಕ ವಿಶೇಷ ಆಂಬ್ಯುಲೆನ್ಸ್ನಲ್ಲಿ ಸ್ಥಳಾಂತರಿಸಲಾಗುವುದು ಎಂದು ಶ್ರೀಗಳ ಆಪ್ತರು ತಿಳಿಸಿದ್ದಾರೆ. ಕೆಎಂಸಿ ಆಸ್ಪತ್ರೆಯಿಂದ ಐದು ಕಿಮೀ ದೂರದಲ್ಲಿರುವ ಪೇಜಾವರ ಮಠಕ್ಕೆ ಕರೆದೊಯ್ಯಲು ಸಿದ್ಧತೆ ಸಾಗಿದೆ.
ಈ ಮಧ್ಯೆ, ಪೇಜಾವರ ಮಠವೂ ಸೇರಿದಂತೆ ಕೃಷ್ಣ ದೇಗುಲ ಸುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೆಎಂಸಿ ಆಸ್ಪತ್ರೆ ಬಳಿಯೂ ಬಿಗಿಭದ್ರತೆ ಮಾಡಲಾಗಿದೆ.
ಮಠದಲ್ಲಿ ನಿತ್ಯವೂ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಆಸ್ಥಾನ ಪೂಜೆ ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ನೆರವೇರುತ್ತಿದೆ. ಈ ಪೂಜೆ ನಡೆಯುವ ಸಮೀಪದ ಕೊಠಡಿಯಲ್ಲೇ ಪೇಜಾವರ ಶ್ರೀಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಸೇರಿದಂತೆ ಗಣ್ಯರ ದಂಡೇ ಉಡುಪಿಯಲ್ಲಿದ್ದು, ಗಣ್ಯರೂ ಸೇರಿದಂತೆ ಎಲ್ಲ ಭಕ್ತರಿಗೆ ಪೇಜಾವರ ಶ್ರೀಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕಳೆದ ಸುಮಾರು ಹತ್ತು ದಿನಗಳಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ್ವತೀರ್ಥ ಶ್ರೀಗಳ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಭಾನುವಾರ ಶ್ರೀಗಳನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬರಲಾಗಿದೆ. ಇದು, ಶ್ರೀಗಳ ಆಸೆ ಕೂಡ ಆಗಿತ್ತು” ಎಂದು ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥರು ಶನಿವಾರ ರಾತ್ರಿ ಹೇಳಿದ್ದರು.
ಪೇಜಾವರ ಶ್ರೀ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಯಲ್ಲೇ ತಂಗಿದ್ದು, ಭಾನುವಾರದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಉಡುಪಿಯಲ್ಲೇ ತಂಗಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಕೂಡ ಉಡುಪಿಗೆ ದೌಡಾಯಿಸಿದ್ದಾರೆ.
ಕೆಲ ಹೊತ್ತಿನಲ್ಲೇ ಮಠಕ್ಕೆ ಪೇಜಾವರ ಶ್ರೀ
Follow Us