ಬಳ್ಳಾರಿ: ಖ್ಯಾತ ಹಿರಿಯ ರಂಗಕರ್ಮಿ ಹಾಗೂ ಗಾಯಕಿ ಸುಭದ್ರಮ್ಮ ಮನ್ಸೂರ್ (81) ಅವರು ಬುಧವಾರ (ಜುಲೈ 15) ತಡರಾತ್ರಿ ನಿಧನರಾದರು.
ತೀವ್ರ ಉಸಿರಾಟದ ಸಮಸ್ಯೆ ಹಾಗೂ ಹೃದಯಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಸುಭದ್ರಮ್ಮ, ಬಳ್ಳಾರಿ ಕೌಲ್ ಬಜಾರ್ ನ ರೇಡಿಯೋ ಪಾರ್ಕ್ ಬಳಿಯಿರುವ ತಮ್ಮ ಸ್ವಗೃಹದಲ್ಲಿ ಬುಧವಾರ ರಾತ್ರಿ 12.45ಕ್ಕೆ ವಿಧಿವಶರಾದರೆಂದು ಕುಟುಂಬದ ಮೂಲಗಳು ತಿಳಿಸಿವೆ.
12ರ ವಯಸ್ಸಿನಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಸುಭದ್ರಮ್ಮ ಅವರು ಏಣಗಿ ಬಾಳಪ್ಪ ನಾಟಕ ಕಂಪನಿ, ಮಾಸ್ಟರ್ ಹಿರಣ್ಣಯ್ಯ ನಾಟಕ ಕಂಪನಿ, ಬಾಗಲಕೋಟೆ ಬೆನಕಪ್ಪ ನಾಟಕ ಕಂಪನಿ ಸೇರಿದಂತೆ ಹಲವು ಕಂಪನಿಗಳಲ್ಲಿ ಕಲಾಸೇವೆ ಗೈದಿದ್ದರು. ಮಹಾಭಾರತದ ದ್ರೌಪತಿ, ಹೆಮರೆಡ್ಡಿ ಮಲ್ಲಮ್ಮನ ಪಾತ್ರಗಳಲ್ಲಿ ಮಿಂಚಿ ಪ್ರೇಕ್ಷಕರ ಅಭಿಮಾನ ಗಳಿಸಿದ್ದರು.
ಅರ್ಧ ಶತಮಾನದಷ್ಟು ಕಾಲ ನಿರಂತರ ರಂಗಸೇವೆಯಲ್ಲಿ ತೊಡಗಿಕೊಂಡಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕನ್ನಡ ವಿಶ್ವವಿದ್ಯಾಲಯ ವತಿಯಿಂದ ನಾಡೋಜ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ಚಿಂದೋಡಿಲೀಲಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುನಸ್ಕಾರಗಳಿಗೆ ಭಾಜನರಾಗಿದ್ದರು. ಅವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಗುರುವಾರ (ಜುಲೈ 16) ಮಧ್ಯಾಹ್ನ 3.30ಕ್ಕೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಹಿರಿಯ ರಂಗಕರ್ಮಿ ಸುಭದ್ರಮ್ಮ ಮನ್ಸೂರ್ ಇನ್ನಿಲ್ಲ
Follow Us