ಉಡುಪಿ: ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಯಾವ ಜಮೀನಿನಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಜಮೀನನ್ನು ತಮ್ಮ ಸ್ವಂತ ಹಣದಲ್ಲಿ ಖರೀದಿಸಿದ್ದಾಗಿ ಹೇಳಿದ್ದಾರೆ, ಆದರೆ, ಇದು ಯಾವ ಜಮೀನು ಎಂದು ತಿಳಿದಿಲ್ಲ. 2017-18ರಲ್ಲಿ ಸರ್ಕಾರದಿಂದ ಬೇಕಾಬಿಟ್ಟಿಯಾಗಿ ಜಮೀನು ಹಂಚಿಕೆಯಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರವಿದ್ದಾಗ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿರುವ 16 ಎಕರೆ ಜಮೀನಿನಲ್ಲಿ 10 ಎಕರೆ ಭೂಮಿಯನ್ನು ತಮ್ಮ ಸ್ವಂತ ಹಣ ನೀಡಿ ಹಕ್ಕುಪತ್ರ ಪಡೆದಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದರು. ಆದರೆ ಈ ಜಮೀನಿನ ಬಗ್ಗೆ ಹಾರೋಬೆಲೆಯಲ್ಲಿಯೇ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಮೆ ನಿರ್ಮಾಣವಾಗುತ್ತಿರುವ ಜಮೀನು ಗೋಮಾಳದ ಜಮೀನಾಗಿದೆ ಎಂದು ಕೆಲವರು ವಾದಿಸಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಕಪಾಲಬೆಟ್ಟದ 10 ಎಕರೆ ಪ್ರದೇಶದಲ್ಲಿ 114 ಅಡಿ ಎತ್ತರದ ಯೇಸು ಕ್ರೈಸ್ತರ ಪ್ರತಿಮೆ ನಿರ್ಮಾಣಕ್ಕೆ ಕ್ರಿಸ್ಮಸ್ ದಿನ ಡಿಕೆಶಿ ಅಡಿಗಲ್ಲು ಹಾಕಿದ್ದರು. ಇದು ಪೂರ್ಣಗೊಂಡರೆ ವಿಶ್ವದ ಅತಿ ಎತ್ತರದ ಯೇಸು ಪ್ರತಿಮೆ ಎನಿಸಲಿದೆ.
ಯೇಸು ಪ್ರತಿಮೆ ನಿರ್ಮಾಣ; ಭೂ ತನಿಖೆಗೆ ಸರ್ಕಾರ ನಿರ್ಧಾರ
Follow Us