ನವದೆಹಲಿ/ಕೊಲ್ಕತ್ತಾ: ವೇತನ ಸೇರಿ ಅಗತ್ಯ ಸೌಲಭ್ಯ ನೀಡುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ನೊಂದಿದ್ದಾರೆನ್ನಲಾದ ಪಶ್ಚಿಮ ಬಂಗಾಳ ಆಸ್ಪತ್ರೆಗಳ ಸುಮಾರು 400 ನರ್ಸ್ ಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.
ಆದರೂ ದಾದಿಯರ ಸಾಮೂಹಿಕ ರಾಜೀನಾಮೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. 185 ದಾದಿಯರು ಶನಿವಾರ ಮಣಿಪುರಕ್ಕೆ ಹಿಂದಿರುಗಿದ್ದರೆ, ಇನ್ನೂ 186 ಮಂದಿ ಒಡಿಶಾ, ಜಾರ್ಖಂಡ್, ಛತ್ತೀಸ್ಗಡ ಮತ್ತು ಇತರ ರಾಜ್ಯಗಳತ್ತ ಹೊರಟಿದ್ದಾರೆ ಎಂದು ತಿಳಿದುಬಂದಿದೆ.
ಈ ದಾದಿಯರೆಲ್ಲರೂ ಕೋಲ್ಕತಾ ಸೇರಿ ರಾಜ್ಯಾದ್ಯಂತ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪಶ್ಚಿಮ ಬಂಗಾಳದಲ್ಲಿ ಕೊರೋನಾ ಸಾವಿನ ಸಂಖ್ಯೆ 232ಕ್ಕೆ ಏರಿರುವುದರ ಮಧ್ಯೆಯೇ ನರ್ಸ್ ಗಳು ಈ ನಿರ್ಧಾರ ಕೈಗೊಂಡಿರುವುದರಿಂದ ಅವರನ್ನು ಮನವೊಲಿಸಲು ಮತ್ತು ಕಾರಣ ಪತ್ತೆ ಹಚ್ಚಲು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂಬ ಸಲಹೆಗಳು ಕೇಳಿಬರುತ್ತಿವೆ.