ಉಡುಪಿ: ‘ಪೇಜಾವರ ಶ್ರೀ’ಗಳೆಂದೇ ಪ್ರಸಿದ್ಧರಾಗಿದ್ದ ಪೇಜಾವರ ಮಠದ ಹಿರಿಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ (88) ಇಂದು ಬೆಳಗ್ಗೆ 9:20 ಕ್ಕೆ ವಿಷ್ಣುಪಾದದಲ್ಲಿ ಲೀನರಾದರು.
ಇದರೊಂದಿಗೆ ಯುಗದ ಸಂತನೊಬ್ಬನ ಬದುಕು ಅಂತ್ಯವಾಗಿದೆ. ಸಮಾಜದ ದಿವ್ಯಚೇತನವೊಂದು ಬಾರದ ಲೋಕಕ್ಕೆ ತೆರಳಿದೆ. ಬದುಕಿದ್ದಷ್ಟೂ ಕಾಲ ಅತಿ ಕ್ರಿಯಾಶೀಲರಾಗಿರುತ್ತಿದ್ದ, ಪಾದರಸದಂತಿದ್ದ ಶ್ರೀಗಳು ಇನ್ನು ನಿಶ್ಚಲರು. ದೇಶದ, ಅದರಲ್ಲೂ ಕರ್ನಾಟಕದ ಮಟ್ಟಿಗೆ ದೊಡ್ಡ ಶೂನ್ಯವೇ ಆವರಿಸಿದೆ.
ಶ್ರೀಗಳನ್ನು ಉಳಿಸಿಕೊಳ್ಳಲೇಬೇಕೆಂಬ ಮಣಿಪಾಲ ಕೆಎಂಸಿ ಹಾಗೂ ದೆಹಲಿ ಏಮ್ಸ್ ತಜ್ಞ ವೈದ್ಯರ ಒಂಭತ್ತು ದಿನಗಳ ಸತತ ಯತ್ನ ಕೊನೆಗೂ ಫಲ ಕೊಡಲಿಲ್ಲ. ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಕಳೆದೆರಡು ದಿನಗಳಿಂದ ಚಿಕಿತ್ಸೆಗೂ ಸ್ಪಂದಿಸುತ್ತಿರಲಿಲ್ಲ.
ತಮ್ಮ ಏಳನೇ ವಯಸ್ಸಿನಲ್ಲೇ ಪೇಜಾವರ ಮಠದ ಶ್ರೀ ವಿಶ್ವಮಾನ್ಯತೀರ್ಥರಿಂದ ಸನ್ಯಾಸದೀಕ್ಷೆ ಪಡೆದುಕೊಂಡಿದ್ದ ವೆಂಕಟರಮಣ (ಸನ್ಯಾಸದೀಕ್ಷೆಗೂ ಮೊದಲಿನ ಹೆಸರು), ಸುದೀರ್ಘ ಎಂಟು ದಶಕಗಳ ಕಾಲ ಸನ್ಯಾಸ ಜೀವನ ಸಾಗಿಸಿ ಶ್ರೇಷ್ಠರೆನಿಸಿದ್ದಾರೆ. ತಮ್ಮ ಚಿಂತನೆಗಳಿಂದ ಜನಪ್ರಿಯರಾಗಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕೆಂದು ಬಲವಾಗಿ ಪ್ರತಿಪಾದಿಸಿದ್ದ ಪೇಜಾವರ ಸ್ವಾಮೀಜಿ, ನಿರ್ಮಾಣಕ್ಕೆ ಇದ್ದ ಅಡ್ಡಿಗಳೆಲ್ಲ ದೂರವಾಗಿ ರಾಮಮಂದಿರ ನಿರ್ಮಾಣದ ಕನಸು ನನಸಾಗುವ ಹೊತ್ತಲ್ಲೇ ಇಹಲೋಕ ತ್ಯಜಿಸಿದ್ದಾರೆ. `ಶ್ರೀಗಳು ರಾಮಮಂದಿರ ನಿರ್ಮಾಣವಾಗುವವರೆಗಾದರೂ ಇರಬೇಕಿತ್ತು’ ಎಂಬ ಮಾತು ಎಲ್ಲೆಡೆ ಕೇಳಿಬಂತು. ಆದರೆ, ವಿಧಿಯ ಅಟ್ಟಹಾಸದೆದುರು ಈ ಮಾತೇ ಮೌನವಾಗಿತ್ತು.
ಬಾಲ್ಯದ ನೆನಪುಗಳು, ಮಠದ ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಅನುಭವ, ಎರಡನೆಯ ಮಹಾಯುದ್ಧದ ಗಾಯಾಳುಗಳ ಶುಶ್ರೂಷೆಗೆ ಹೋಗಬೇಕೆಂದು ಶ್ರೀಗಳು ಕನಸು ಕಂಡದ್ದು, ಗಾಂಧೀಜಿಯವರ ಪ್ರಭಾವ, ಮಾಧ್ವ ಮಹಾಮಂಡಲದ ಸ್ಥಾಪನೆಗೆ ಪಟ್ಟ ಶ್ರಮ, ದಲಿತರು ಅನುಭವಿಸುವ ಅವಮಾನದ ಪ್ರತ್ಯಕ್ಷ ಅನುಭವ ಎಲ್ಲವೂ ಈಗ ಇತಿಹಾಸ.
‘ಸಮಾಜದಲ್ಲಿ ಸಮುದ್ರ ಮಥನಕ್ಕೆ ಕಾರಣವಾದ’ ದಲಿತರ ಕೇರಿ ಭೇಟಿ, ವಾಕ್ಯಾರ್ಥಗಳು, ತುರ್ತು ಪರಿಸ್ಥಿತಿಯ ಪ್ರತಿಭಟನೆ, ಪರಿಸರ ಚಳವಳಿ, ರಾಮಜನ್ಮಭೂಮಿ ಪ್ರಕರಣದ ಕೆಲವು ತೆರೆಮರೆಯ ಸಂಗತಿಗಳು, ಪಂಜಾಬಿನ ಶಾಂತಿಯಾತ್ರೆ, ಗೋಕಾಕ್ ಚಳವಳಿಗೆ ಬೆಂಬಲ… ಇವೆಲ್ಲ ಈಗ ನೆನಪು ಮಾತ್ರ.
ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿ, ಐದು ಪರ್ಯಾಯಗಳಲ್ಲಿ ಪಾಲ್ಗೊಂಡ ಹಿರಿಯ ಶ್ರೀಗಳಾಗಿ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ ಸೇವೆ ಸಲ್ಲಿಸಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ನಿಧನ ವೈಷ್ಣವ ಸಮುದಾಯಕ್ಕಷ್ಟೇ ಅಲ್ಲ, ಇಡೀ ಸಮಾಜಕ್ಕೆ ಬಹುದೊಡ್ಡ ನಷ್ಟವಾಗಿದೆ.